ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ! | Janata news
ಮೈಸೂರು : ವೃದ್ಧ ನಿವೃತ್ತ ಪ್ರಾಂಶುಪಾಲರೊಬ್ಬರನ್ನು ಅವರ ನಿವಾಸದಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ಘಟನೆ ಮೈಸೂರಿನ ನಿವೇದಿತಾ ನಗರದಲ್ಲಿ ನಡೆದಿದೆ.
ಕೊಲೆಯಾದವರನ್ನು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ (67) ಎಂದು ಗುರುತಿಸಲಾಗಿದ್ದು, ಇವರು ಪತ್ನಿಯಿಂದ ಪ್ರತ್ಯೇಕವಾಗಿ ಒಬ್ಬರೇ ವಾಸವಿದ್ದರು.
ಭಾನುವಾರ ತಡರಾತ್ರಿ ಸುಮಾರಿಗೆ ಆಗಮನಿಸಿದ ಇಬ್ಬರು ಹಂತಕರು ನಿವೃತ್ತ ಪ್ರಾಂಶುಪಾಲ ಪರಶಿವಮೂರ್ತಿ ಅವರ ಮನೆಗೆ ಆಗಮಿಸಿ ಕಾಲಿಂಗ್ ಬೆಲ್ ಒತ್ತಿದ್ದಾರೆ. ಬಳಿಕ ಬಾಗಿಲು ತೆರೆಯುತ್ತಿದ್ದಂತೆ ಪರಶಿವಮೂರ್ತಿ ಅವರಿಗೆ ಇರಿದಿದ್ದಾರೆ. ಎದೆ, ಹೊಟ್ಟೆ ಮತ್ತು ಕುತ್ತಿಗೆ ಭಾಗಗಳಿಗೆ ಮನಸೋ ಇಚ್ಛೆ ಚುಚ್ಚಿ ಪರಾರಿಯಾಗಿದ್ದಾರೆ. ತೀವ್ರ ರಕ್ತಸ್ರಾವದೊಂದಿಗೆ ಮನೆಯ ಹಾಲ್ಗೆ ಬಂದ ಇವರು ಕೆಲವೇ ನಿಮಿಷಗಳಲ್ಲಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.
ಮೂಲತಃ ತಿ.ನರಸೀಪುರ ತಾಲ್ಲೂಕಿನ ಮೂಗೂರು ಗ್ರಾಮದವರಾದ ಇವರು ಕುವೆಂಪುನಗರ ಪಿಯು ಕಾಲೇಜು, ಚಿತ್ರದುರ್ಗದ ಜಿಲ್ಲೆಯ ಚಳ್ಳಕೆರೆ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಬಳಿಕ ಹಾಸನದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ತವ್ಯದಲ್ಲಿದ್ದಾಗಲೇ ನಿವೃತ್ತರಾಗಿದ್ದರು.
ಇವರ ಪತ್ನಿಯು ತಮ್ಮ 8 ವರ್ಷದ ದತ್ತು ಪುತ್ರನೊಂದಿಗೆ ಪ್ರತ್ಯೇಕವಾಗಿ ಕುವೆಂಪುನಗರದಲ್ಲಿ ವಾಸವಿದ್ದರು. ಪರಶಿವಮೂರ್ತಿ ಬಡ್ಡಿ ವ್ಯವಹಾರ ಸೇರಿದಂತೆ ಹಲವು ವ್ಯವಹಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಕಳೆದ 15 ವರ್ಷದ ಹಿಂದೆಯಷ್ಟೇ ಸವಿತಾ ಎಂಬುವವರನ್ನು ವಿವಾಹವಾಗಿದ್ದರು. ಈ ದಂಪತಿಗೆ ಮಕ್ಕಳಿಲ್ಲದ ಕಾರಣ ಬಾಲಕನೊಬ್ಬನನ್ನು ದತ್ತು ಪಡೆದುಕೊಂಡಿದ್ದರು. ನಂತರ ಇಬ್ಬರ ನಡುವೆ ಭಿನ್ನಾಭಿಪ್ರಾಯದಿಂದ ದಂಪತಿ ದೂರವಾಗಿದ್ದುರು.