ವಾರಾಂತ್ಯ ಲಾಕ್ ಡೌನ್: ಬೆಂಗಳೂರಿನಲ್ಲಿ ಎರಡು ದಿನ ನಮ್ಮ ಮೆಟ್ರೋ ಸಂಚಾರ ಬಂದ್ | ಜನತಾ ನ್ಯೂಸ್
ಬೆಂಗಳೂರು : ಬೆಂಗಳೂರಿನಲ್ಲಿ ವಾರಾಂತ್ಯದ ನಿಷೇಧಾಜ್ಞೆಯನ್ನು ಕಟ್ಟುನಿಟ್ಟಿನಿಂದ ಜಾರಿಗೊಳಿಸುವುದಕ್ಕೆ ಸರ್ಕಾರ ಸಕಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದೆ. ಶುಕ್ರವಾರ ರಾತ್ರಿಯಿಂದಲೇ ವಾರಾಂತ್ಯ ಲಾಕ್ ಡೌನ್ ಜಾರಿಯಾಗುತ್ತಿದ್ದು, ಶನಿವಾರ ಮತ್ತು ಭಾನುವಾರ ಕರುನಾಡು ಸಂಪೂರ್ಣ ಬಂದ್ ಆಗಲಿದೆ.
ಸಿಲಿಕಾನ್ ಸಿಟಿ ಜನರ ಸಂಚಾರ ನಾಡಿ ಆಗಿರುವ ಮೆಟ್ರೋ ರೈಲಿನ ಸಂಚಾರವನ್ನು ವಾರಾಂತ್ಯದಲ್ಲಿ ಬಂದ್ ಮಾಡುವುದಕ್ಕೆ ನಿರ್ಧರಿಸಲಾಗಿದೆ.
ವಾರಾಂತ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಇಂದು ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆಯವರೆಗೆ ಯಾವುದೇ ಬಿಎಂಟಿಸಿ ಬಸ್ ಗಳು ಸಂಚರಿಸುವುದಿಲ್ಲ.
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ನಡುವೆ ಸೋಮವಾರದಿಂದ ಶುಕ್ರವಾರದವರೆಗೂ ಬೆಳಗ್ಗೆ 7 ರಿಂದ ರೈಲು ಸಂಚಾರ ಆರಂಭವಾಗಲಿದೆ. ನಾಗಸಂದ್ರ, ಸಿಲ್ಕ್ ಬೋರ್ಡ್, ಮೈಸೂರು ರಸ್ತೆ ಹಾಗೂ ಬೈಯಪ್ಪನಹಳ್ಳಿ ಮಾರ್ಗದಲ್ಲಿ ರೈಲು ಸಂಚರಿಸಲಿವೆ. ರಾತ್ರಿ 7.30ಕ್ಕೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ಕೊನೆಯ ಮೆಟ್ರೋ ರೈಲು ಸಂಚಾರ ನಡೆಸಲಿದೆ.
ನಗರದಲ್ಲಿ ನಮ್ಮ ಮೆಟ್ರೋ ಸಂಚಾರ ಸಹ ಸಂಪೂರ್ಣ ಬಂದ್ ಆಗಲಿದ್ದು, ಇಂದು ಸಂಜೆ 7.30 ರಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಯಾವುದೇ ಮೆಟ್ರೋ ರೈಲು ಸಂಚರಿಸುವುದಿಲ್ಲ. ಇಂದು ಸಂಜೆ 7.30ಕ್ಕೆ ಮೈಸೂರು ರಸ್ತೆ, ಬೈಯಪ್ಪನಹಳ್ಳಿ, ನಾಗಸಂದ್ರ ಮತ್ತು ಸಿಲ್ಕ್ ಸಂಸ್ಥೆಯಿಂದ ಕೊನೆಯ ರೈಲು ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.