ಇನ್ನೂ ಅನ್ ಲಾಕ್ ಆಗಿಲ್ಲ, ಪೊಲೀಸ್ ಪಡೆ ಬಳಸುವ ಅನಿವಾರ್ಯತೆಯನ್ನ ಜನತೆ ಸೃಷ್ಟಿಸಬಾರದು | ಜನತಾ ನ್ಯೂಸ್
ಬೆಂಗಳೂರು : ಲಾಕ್ಡೌನ್ ನಿರ್ಬಂಧ ಸಡಿಲಿಕೆ ಮಾಡಲಾಗಿದೆ. ಜೂನ್ 14ರಿಂದ ಅದು ಜಾರಿಗೆ ಬರಲಿದೆ. ಆದರೆ, ಇಂದೇ ಜನರು ಸಡಿಲಿಕೆ ಜಾರಿಯಾಗಿರುವಂತೆ ಸಂಚಾರ ಮಾಡುತ್ತಿದ್ದಾರೆ. ಇದು ಸರಿಯಲ್ಲ. ನಮ್ಮ ಪೊಲೀಸ್ ಪಡೆಯನ್ನು ಬಳಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಸಬಾರದು ಎಂದು ಜನತೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದ್ದಾರೆ.
ಜನರು ಕೊರೋನಾ ತಡೆಗೆ ಸ್ವಯಂ ನಿಯಂತ್ರಣ ಮಾಡಬೇಕು, ಪೊಲೀಸರು ಕಾನೂನನ್ನು ಕೈಗೆತ್ತಿಕೊಳ್ಳುವ ಅವಕಾಶ ಬರಬಾರದು, ಪೊಲೀಸರು ಹಿಡೀತಿಲ್ಲ ಎಂದು ಕೇರ್ ಲೆಸ್ ಮಾಡಬೇಡಿ, ರಸ್ತೆಯಲ್ಲಿ ಪೊಲೀಸರು ತಡೆಯದಿದ್ದರೂ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗುವುದರಿಂದ ಕೇಸು ದಾಖಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಜೂನ್ 14ರಿಂಗ ಲಾಕ್ ಡೌನ್ ನಿಯಮಗಳನ್ನು ಪರಿಷ್ಕರಿಸಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ನಿನ್ನೆ ಪ್ರಕಟಿಸಿದೆ. ಬೆಂಗಳೂರು ಸೇರಿದಂತೆ ಕೊರೋನಾ ಸಕ್ರಿಯ ಪ್ರಕರಣಗಳು ಕಡಿಮೆಯಿರುವ ಜಿಲ್ಲೆಗಳಲ್ಲಿ ಹಲವು ಸೇವೆಗಳಿಗೆ ರಿಯಾಯಿತಿ ನೀಡಲಾಗಿದೆ.
ರಾಜ್ಯದಲ್ಲಿ ಆರ್ಥಿಕ ಚಟುವಟಿಕೆ ಪ್ರಾರಂಭ ಮಾಡುವ ಸಲುವಾಗಿ ಕೆಲವು ರಿಯಾಯಿತಿಗಳನ್ನು ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ. ಎಲ್ಲಾ ತರದ ಕೈಗಾರಿಕೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಶೇ.50ರಷ್ಟು ಉದ್ಯೋಗಿಗಳನ್ನು ಬಳಸಿಕೊಂಡು ಉತ್ಪಾದನೆ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ.
ಅಗತ್ಯ ವಸ್ತುಗಳ ಖರೀದಿ ಸಮಯವನ್ನ ವಿಸ್ತರಿಸಲಾಗಿದೆ. ಬೆಳಗ್ಗೆ 6ರಿಂದ 10ರ ಬದಲು 6ರಿಂದ ಮಧ್ಯಾಹ್ನ 2 ಗಂಟೆವರೆಗೆ ಸಮಯ ವಿಸ್ತರಣೆ ಮಾಡಲಾಗಿದೆ.
ಸಾರ್ವಜನಿಕರು ಇಂದಿನಿಂದಲೇ ನಿರ್ಬಂಧ ಸಡಿಲಿಕೆ ಎಂದುಕೊಂಡಿದ್ದಾರೆ. ಆದರೆ, ಇದು ಜೂನ್ 14ರಿಂದ ಜಾರಿಗೆ ಬರಲಿದೆ. ಇಂದೇ ನಮಗೆ ಅವಕಾಶವಿದೆಯೆಂದು ಕೆಲವರು ಓಡಾಡುತ್ತಿದ್ದಾರೆ. ಇದು ಸರಿಯಲ್ಲ, ಇನ್ನೂ ಎರಡು-ಮೂರು ದಿನ ಲಾಕ್ಡೌನ್ ಸಂಪೂರ್ಣ ಇರಲಿದೆ. ಚಾಚೂ ತಪ್ಪದೆ ಜನರು ಪಾಲನೆ ಮಾಡಬೇಕು.