ಹೈಕೋರ್ಟ್ ಸಂಪರ್ಕಿಸುವ ಸ್ವಾತಂತ್ಯ್ರದೊಂದಿಗೆ ಪರಂಬೀರ್ ಸಿಂಗ್ ಅರ್ಜಿ ವಜಾ ಮಾಡಿದ ಸುಪ್ರಿಂ | Janata news
ನವದೆಹಲಿ : 100ಕೋಟಿ ಹಪ್ತಾ ವಸೂಲಿ ಸೇರಿದಂತೆ, ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಅಧಿಕಾರ ದುರುಪಯೋಗ ಆರೋಪ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಭಾರತದ ಸುಪ್ರೀಂ ಕೋರ್ಟ್ ಬುಧವಾರ ತಿರಸ್ಕರಿಸಿದೆ. ಸೋಮವಾರ ಸಲ್ಲಿಸಿದ್ದ ಅರ್ಜಿಯಲ್ಲಿ ಮುಂಬೈ ಪೋಲಿಸ್ ಆಯುಕ್ತ ಹುದ್ದೆಯಿಂದ ಗೃಹರಕ್ಷಕ ದಳಕ್ಕೆ ತಮ್ಮ ವರ್ಗಾವಣೆಯನ್ನು ಪ್ರಶ್ನಿಸಿದ್ದರು.
ವರದಿಗಳ ಪ್ರಕಾರ, ಈ ವಿಚಾರಣೆಯನ್ನು ಕೈಗೆತ್ತಿಕೊಂಡ 2 ನ್ಯಾಯಾಧೀಶರ ನ್ಯಾಯಪೀಠವು ಆರೋಪಗಳು ಮತ್ತು ಪ್ರತಿ-ಆರೋಪಗಳು ಸ್ವರೂಪದಲ್ಲಿ ಗಂಭೀರವಾಗಿದೆ ಎಂದು ಗಮನಿಸಿರುವುದಾಗಿ ಹೇಳಿದ್ದು, ವಿಷಯವು ಗಂಭೀರವಾಗಿದೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಆರ್ಟಿಕಲ್226 ರ ಶಕ್ತಿ ವಿಸ್ತಾರವಾಗಿದೆ. ಹೈಕೋರ್ಟ್ ಇದನ್ನು ನಿಭಾಯಿಸಬಹುದು, ಎಂದು ನ್ಯಾಯಪೀಠ ಹೇಳಿದೆ. ಅವರ ಮನವಿಯನ್ನು ವಜಾಗೊಳಿಸುವಾಗ, ಸುಪ್ರೀಂ ಕೋರ್ಟ್ ಪರಂಬೀರ್ ಸಿಂಗ್ ಅವರಿಗೆ ಬಾಂಬೆ ಹೈಕೋರ್ಟ್ ಅನ್ನು ಸಂಪರ್ಕಿಸುವ ಸ್ವಾತಂತ್ರ್ಯವನ್ನು ನೀಡಿದೆ.
ಮಾರ್ಚ್ 20ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದ ನಂತರ ಮುಂಬೈ ಮಾಜಿ ಪೊಲೀಸ್ ಆಯುಕ್ತ ಸಾಕಷ್ಟು ಕೋಲಾಹಲ ಸೃಷ್ಟಿಸಿದ್ದರು. ಅವರು ತಮ್ಮ ಪತ್ರದಲ್ಲಿ, ಮುಂಬೈ ಪೊಲೀಸರ ಅಪರಾಧ ವಿಭಾಗದ ಅಪರಾಧ ಗುಪ್ತಚರ ಘಟಕದ ಮುಖ್ಯಸ್ಥರಾಗಿದ್ದ ಸಚಿನ್ ವಾಜೆ ಅವರನ್ನು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶಮುಖ್ ಅವರು ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಬಾರಿ ತಮ್ಮ ನಿವಾಸಕ್ಕೆ ಕರೆಸಿಕೊಂಡಿದ್ದರು ಮತ್ತು ಪ್ರತಿ ತಿಂಗಳು 100ಕೋಟಿ ಹಣ ಸಂಗ್ರಹಿಸಲು ಮಾಡಲು ಪದೇ ಪದೇ ಸೂಚನೆ ನೀಡಲಾಗಿದೆ, ಎಂದು ಬಹಿರಂಗ ಪಡಿಸಿದ್ದರು.
ಅನಿಲ್ ದೇಶ್ಮುಖ್ ಈ ಆರೋಪಗಳನ್ನು ಕೂಡಲೇ ನಿರಾಕರಿಸಿದ್ದರು ಮತ್ತು ಪರಂಬೀರ್ ಸಿಂಗ್ ಅವರು ತಮ್ಮದೇ ಆದ ತಪ್ಪಿನಿಂದಾದ ಕಾನೂನು ಪರಿಣಾಮಗಳನ್ನು ತಪ್ಪಿಸಲು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ, ಎಂದು ಹೇಳಿದ್ದಾರೆ.