ಭೂಗತಪಾತಕಿ-ಶಾಸಕ ಮುಖ್ತಾರ್ ಅನ್ಸಾರಿಯನ್ನು ಉತ್ತರ ಪ್ರದೇಶಕ್ಕೆ ಹಸ್ತಾಂತರಿಸುವಂತೆ ಪಂಜಾಬ್ ಸರ್ಕಾರಕ್ಕೆ ನಿರ್ದೇಶನ ನೀಡಿದ ಸುಪ್ರಿಂ | Janata news
ನವದೆಹಲಿ : ಭೂಗತಪಾತಕಿ ಹಾಗೂ ರಾಜಕಾರಣಿ ಮುಖ್ತಾರ್ ಅನ್ಸಾರಿ ಅವರನ್ನು ಪಂಜಾಬ್ನಿಂದ ಉತ್ತರ ಪ್ರದೇಶದ ಜೈಲಿಗೆ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ. ಅನ್ಸಾರಿಯನ್ನು ಪಂಜಾಬ್ನ ರೂಪನಗರ ಜೈಲಿನಿಂದ ಉತ್ತರ ಪ್ರದೇಶದ ಬಾಂಡಾ ಜೈಲಿಗೆ ಸ್ಥಳಾಂತರಿಸಲು ನ್ಯಾಯಾಲಯ ಎರಡು ವಾರಗಳ ಸಮಯವನ್ನು ನೀಡಿದೆ. ಅನ್ಸಾರಿ ಉತ್ತರ ಪ್ರದೇಶದ ಮೌ ವಿಧಾನಸಭೆ ಕ್ಷೇತ್ರದ ಪ್ರಸ್ತುತ ಬಹುಜನ್ ಸಮಾಜವಾದಿ ಪಾರ್ಟಿ(ಬಿಎಸ್ಪಿ) ಶಾಸಕರಾಗಿದ್ದಾರೆ.
ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಆರ್.ಎಸ್.ರೆಡ್ಡಿ ಅವರ ನ್ಯಾಯಪೀಠವು, ಅನ್ಸಾರಿಯನ್ನು ಹಸ್ತಾಂತರಿಸುವಂತೆ ಪಂಜಾಬ್ ಸರ್ಕಾರ ಮತ್ತು ರೂಪನಗರ ಜೈಲು ಪ್ರಾಧಿಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ, ಉತ್ತರ ಪ್ರದೇಶ ಸರ್ಕಾರ ಸಲ್ಲಿಸಿದ್ದ ಮನವಿಯ ಮೇರೆಗೆ ತೀರ್ಪು ನೀಡಿದೆ.
ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶದ ಸರ್ಕಾರಕ್ಕೆ ರೂಪ್ನಗರ ಜೈಲಿನಿಂದ ಉತ್ತರ ಪ್ರದೇಶದ ಬಂಡಾ ಜಿಲ್ಲಾ ಜೈಲಿಗೆ ಅನ್ಸಾರಿ ವರ್ಗಾವಣೆಯನ್ನು ಕೋರಲು ಯಾವುದೇ ಮೂಲಭೂತ ಹಕ್ಕು ಸಿಕ್ಕಿಲ್ಲ, ಎಂದು ಪಂಜಾಬ್ ಸರ್ಕಾರ ಮಾರ್ಚ್ 4 ರಂದು, ಉನ್ನತ ನ್ಯಾಯಾಲಯಕ್ಕೆ ತಿಳಿಸಿತ್ತು.
2019ರ ಜನವರಿಯಿಂದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ಸಾರಿ ಅವರನ್ನು ಪಂಜಾಬ್ನ ರುಪ್ನಗರದಲ್ಲಿ ಜಿಲ್ಲಾ ಜೈಲಿನ ಇಡಲಾಗಿದೆ. ಉತ್ತರಪ್ರದೇಶದಲ್ಲಿ ದಾಖಲಾದ ಹಲವಾರು ಭೀಕರ ಅಪರಾಧಗಳ ಪ್ರಕರಣದಲ್ಲೂ ಅನ್ಸಾರಿ ಆರೋಪಿಯಾಗಿದ್ದಾನೆ.