ಬೆಂಗಳೂರಲ್ಲಿ ಬರ್ಬರ ಕೊಲೆ: ಸರ್ಕಾರಿ ಕಚೇರಿ ಶೌಚಾಲಯದಲ್ಲಿ ದಂಪತಿ ಶವ ಬಿಸಾಡಿದ ಕಿರಾತಕರು! | ಜನತಾ ನ್ಯೂಸ್
ಬೆಂಗಳೂರು : ಕಚೇರಿಯ ಶೌಚಾಲಯದಲ್ಲಿ ದಂಪತಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹನುಮಂತರಾಯ (41) ಹಾಗೂ ಅವರ ಪತ್ನಿ ಹೊನ್ನಮ್ಮ (34) ಕೊಲೆಯಾದವರು.
ಮೂಲತಃ ಯಾದಗಿರಿ ಜಿಲ್ಲೆಯ ಸುರಪುರದವರು. ಹಲವು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಬೃಂದಾವನ ನಗರದ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯಲ್ಲಿ ಹನುಮಂತರಾಯ ಸೆಕ್ಯೂರಿಟಿ ಗಾರ್ಡ್ ಆಗಿ, ಪತ್ನಿ ಹೊನ್ನಮ್ಮ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದರು.
ದಂಪತಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದರು. ಎಂದಿನಂತೆ ಗುರುವಾರ ಕಚೇರಿಗೆ ಬಂದ ಸಿಬ್ಬಂದಿ ಬಾಗಿಲು ತೆಗೆಯದೆ ಇದ್ದಾಗ ಅನುಮಾನಗೊಂಡು ಆತಂಕದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಮುರಿದು ಒಳಪ್ರವೇಶಿದಾಗ ದಂಪತಿ ಅನುಮಾನಾಸ್ಪದವಾಗಿ ಮೃತಪಟ್ಟಿರುವುದು ಗೊತ್ತಾಗಿದೆ.