ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಕುಳಿತುಕೊಳ್ಳುತ್ತಿದ್ದ ಎಫ್ಡಿಎ ಮಾಯಣ್ಣರ ಬಳಿ ಕೋಟಿ ಕೋಟಿ ಆಸ್ತಿ | ಜನತಾ ನ್ಯೂಸ್
ಬೆಂಗಳೂರು : ಬಿಬಿಎಂಪಿ ರಸ್ತೆ ವಿಭಾಗದ ಎಫ್ ಡಿಸಿ ಮಾಯಣ್ಣ ವಿರುದ್ದ ನೂರಾರು ಆರೋಪಗಳಿವೆ. ಎಷ್ಟೇ ವರ್ಗಾವಣೆ ಮಾಡಿದ್ರೂ ಅದೇ ಜಾಗಕ್ಕೆ ಬಂದು ಮಾಯಣ್ಣ ಕುಳಿತುಕೊಳ್ಳುತ್ತಿದ್ದನು.
ಬಿಬಿಎಂಪಿ ನೌಕರ ಮಾಯಣ್ಣ ಅವರ ಮನೆ ಮೇಲೆ ಇಂದು ಎಸಿಬಿ ದಾಳಿ ನಡೆಸಿದೆ. ದಾಳಿಯಲ್ಲಿ ಭಾರೀ ಪ್ರಮಾಣದ ದಾಖಲೆಗಳು ದೊರೆತಿದ್ದು, ಇವರ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿದೆ.
ಮಾಯಣ್ಣ ಅವರು ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗದಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2009 ರಿಂದ 11 ವರ್ಷಗಳ ಕಾಲ ಒಂದೇ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಸಾಕಷ್ಟು ಬಾರಿ ಬಿಬಿಎಂಪಿಯ ಬೇರೆ ವಿಭಾಗಗಳಿಗೆ ವರ್ಗಾವಣೆಗಳಾದ್ದರೂ, ಮೇಲಾಧಿಕಾರಿಗಳಿಂದ ಒತ್ತಡ ತಂದು ಮತ್ತದೇ ಪೋಸ್ಟ್ನಲ್ಲಿ ಉಳಿದುಕೊಳ್ಳುತ್ತಿದ್ದರು. ಐದು ವರ್ಷದ ಹಿಂದೆ ಸಸ್ಪೆಂಡ್ ಆಗಿದ್ದರು. ಸಸ್ಪೆಂಡ್ ರಿವೋಕ್ ಮಾಡಿಸಿಕೊಂಡು ಮತ್ತೆ ಇದೇ ಹುದ್ದೆಯಲ್ಲೇ ಮುಂದುವರೆದಿದ್ದರು.
2012 /13 ರಲ್ಲಿ ಕಾನೂನು ಬಾಹಿರವಾಗಿ ಗುತ್ತಿಗೆದಾರರಿಗೆ 135 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿರುವ ಆರೋಪ ಸಹ ಮಾಯಣ್ಣನ ಮೇಲಿದೆ. ಜೊತೆಗೆ 26 ಕೋಟಿರೂಪಾಯಿ ಹೆಚ್ಚಿನ ಹಣವನ್ನು ಗುತ್ತಿಗೆದಾರರಿಗೆ ಪಾವತಿಸಿದ್ದ ಆರೋಪ ಇದೆ. ಬಿಬಿಎಂಪಿ ಲೆಕ್ಕಪರಿಶೋಧಕ ವರದಿಯಲ್ಲಿ ಮಾಯಣ್ಣ ಅಕ್ರಮ ಬಯಲು ಆಗಿತ್ತು.
ಬಿಬಿಎಂಪಿ ಲೆಕ್ಕಪರಿಶೋಧಕ ವರದಿಯಲ್ಲಿ ಮಾಯಣ್ಣ ಅಕ್ರಮ ಬಯಲಾದ ಹಿನ್ನೆಲೆಯಲ್ಲಿ ಮಾಯಣ್ಣ ಅವರ ಸ್ವಂತ ಅಕೌಂಟ್ನಿಂದ ಹಣ ವಸೂಲಿ ಮಾಡುವಂತೆ ನಗರಾಭಿವೃದ್ಧಿ ಇಲಾಖೆ ಆದೇಶಿಸಿತ್ತು. ಎಸಿಬಿ ಬೇಟೆಗೆ ಬಿದ್ದ ಮಾಯಣ್ಣ ಅವರು ಒಟ್ಟಾರೆಯಾಗಿ 135 ಕೋಟಿ ರೂ.ಗಳನ್ನು ಸರ್ಕಾರಕ್ಕೆ ನೀಡಬೇಕಿದೆ.
ಬಿಬಿಎಂಪಿ ಮೂಲ ಸೌಕರ್ಯ ವಿಭಾಗದಲ್ಲಿ 198 ವಾರ್ಡ್ಗಳಿಗೂ ಇದ್ದ ಏಕೈಕ ಎಫ್.ಡಿ.ಎ ಮಾಯಣ್ಣ. ಮಾಯಣ್ಣ ಬಿಬಿಎಂಪಿಯ ರಸ್ತೆ ಅಭಿವೃದ್ದಿ ಮತ್ತು ಮೂಲಭೂತ ಸೌಕರ್ಯದ ಎಫ್ಡಿಎ ನೌಕರ. ಮಾಯಣ್ಣ ತಂಗಿ, ಬಾಮೈದ ಹಾಗೂ ತಮ್ಮಂದಿರ ಮನೆ ಸೇರಿ ಒಟ್ಟು ಎಂಟು ಕಡೆ ದಾಳಿ ಮಾಡಲಾಗಿದೆ. ಕತ್ರಿಗುಪ್ಪೆ, ನಾಯಂಡಳ್ಳಿ, ವಿದ್ಯಾಪೀಠ ಸೇರಿ ಒಟ್ಟು ಎಂಟು ಕಡೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಮಾಯಣ್ಣ ಬಳಿ 50 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ. ಬೆಂಗಳೂರಿನ ಹಲವು ಕಡೆ ಹತ್ತಾರು ಮನೆ, ಸೈಟ್ ಹಾಗೂ ಕೋಟ್ಯಂತರ ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ ಎನ್ನಲಾಗಿದೆ.
ಮಾಯಣ್ಣರ ಅಕ್ರಮ ಆಸ್ತಿ ಕಂಡು ಎಸಿಬಿ ಬೆಚ್ಚಿಬಿದ್ದಿದೆ ಎಂದು ಹೇಳಲಾಗಿದೆ. ಈ ಹಿಂದೆ ನಕಲಿ ಬಿಲ್ ಸೃಷ್ಟಿಸಿ ಕೋಟ್ಯಾಂತರ ರೂ. ನಷ್ಟ ಮಾಡಿರುವ ಆರೋಪ ಮಾಯಣ್ಣನ ಮೇಲಿದೆ. ನಕಲಿ ಸಹಿ, ಬಿಲ್, ದಾಖಲೆ ಸೃಷ್ಟಿಸಿ ವಂಚನೆ ಮಾಡಿದ್ದಾರೆಂಬ ಆರೋಪವಿದೆ. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ದೂರು ದಾಖಲಾಗಿತ್ತು. ಮಾಯಣ್ಣ ಮನೆ ಮೇಲೆ ದಾಳಿ ವೇಳೆ ಅಕ್ರಮ ಆಸ್ತಿ-ಪಾಸ್ತಿ ಪತ್ತೆಯಾಗಿದೆ. ದಾಖಲೆಯಿಲ್ಲದ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ ಎನ್ನಲಾಗಿದೆ.