ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದವರು, ಚುನಾವಣೆಯ ಕಾರಣ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ - ಯೋಗಿ | ಜನತಾ ನ್ಯೂಸ್
ಲಕ್ನೋ : ಕೇಜ್ರಿವಾಲ್ ಈ ಹಿಂದೆ ಶ್ರೀರಾಮನನ್ನು ನಿಂದಿಸುತ್ತಿದ್ದರು ಆದರೆ ರಾಜ್ಯದಲ್ಲಿ ಚುನಾವಣೆ ಸಮೀಪಿಸುತ್ತಿರುವ ಕಾರಣ ಈಗ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ, ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಶ್ರೀರಾಮ ಮಂದಿರ ನಿರ್ಮಾಣವನ್ನು ವಿರೋಧಿಸಿ ಹೇಳಿಕೆ ನೀಡಿದ್ದರೆನ್ನಲಾದ ಕೇಜ್ರಿವಾಲ್ ಅವರು ಅಯೋಧ್ಯೆಯ ಶ್ರೀರಾಮಜನ್ಮಭೂಮಿ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಿದ ದಿನದಂದೇ ಆದಿತ್ಯನಾಥ್ ಅವರ ವಾಗ್ದಾಳಿ ನಡೆದಿದೆ.
ಉ.ಪ್ರ. ಚುನಾವಣೆ ಪ್ರಚಾರದಲ್ಲಿ ಕೇಜ್ರಿವಾಲ್ ನೀಡುತ್ತಿರುವ ಭರವಸೆ ಬಗ್ಗೆ ಮಾತನಾಡಿದ ಅವರು, ಅರವಿಂದ್ ಕೇಜ್ರಿವಾಲ್ ಕೈಯಲ್ಲಿ ದೆಹಲಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ, ಇನ್ನೂ ಉತ್ತರ ಪ್ರದೇಶದಲ್ಲಿ ಉಚಿತ ಯೋಜನೆ ನೀಡುವ ಬಗ್ಗೆ ಮಾತನಾಡುತ್ತಿದ್ದಾರೆ, ಎಂದು ಲೇವಡಿ ಮಾಡಿದ್ದಾರೆ.
"ಈ ದೆಹಲಿಯವರು(ಅರವಿಂದ ಕೇಜ್ರಿವಾಲ್) ಲಾಕ್ಡೌನ್ ಸಮಯದಲ್ಲಿ ಯುಪಿ ಮತ್ತು ಬಿಹಾರದ ಜನರನ್ನು ದೆಹಲಿಯಿಂದ ಹೊರಹಾಕಿದರು ಮತ್ತು ಈಗ ಉತ್ತರ ಪ್ರದೇಶದಲ್ಲಿ ಇದನ್ನು ಮತ್ತು ಅದನ್ನು ಉಚಿತವಾಗಿ ನೀಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರು ಲಾಕ್ಡೌನ್ ಸಮಯದಲ್ಲಿ ಯುಪಿ ಮತ್ತು ಬಿಹಾರದ ಜನರನ್ನು ದೆಹಲಿಯಿಂದ ಹೊರಹಾಕಿದರು. ಅವರು ಭಗವಾನ್ ರಾಮನನ್ನು ನಿಂದಿಸಿದ್ದಾರೆ, ಆದರೆ ಈಗ "ಶ್ರೀರಾಮನ ಆಶೀರ್ವಾದವಿಲ್ಲದೆ ಕೆಲಸಗಳು ಸಾಧ್ಯವಿಲ್ಲ" ಎಂದು ತಿಳಿದಾಗ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಅವರು ಶ್ರೀರಾಮನ ಅಸ್ತಿತ್ವವನ್ನು ಒಪ್ಪಿಕೊಳ್ಳುವುದು ಒಳ್ಳೆಯದು", ಎಂದು ಲಕ್ನೋದಲ್ಲಿ ರ್ಯಾಲಿಯನ್ನುದ್ದೇಶಿಸಿ ಆದಿತ್ಯನಾಥ್ ಹೇಳಿದರು.