ಎರಡು ವರ್ಷದ ಹಿಂದಷ್ಟೇ ಮನೆ ಕಟ್ಟಿ, ಗಂಡ, ಹೆಂಡತಿ ಹಾಗೂ ಮಗ ಆತ್ಮಹತ್ಯೆ! | ಜನತಾ ನ್ಯೂಸ್
ದಾವಣಗೆರೆ : ದಾವಣಗೆರೆಯ ಭಾರತ್ ಕಾಲನಿ ನಿವಾಸಿಗಳಾದ ಕೃಷ್ಣ ನಾಯಕ(35), ಇವರ ಪತ್ನಿ ಸುಮಾ(30), ಮಗು ಧ್ರುವ(6) ಮೃತ ದುರ್ದೈವಿಗಳು. ಈ ದುರ್ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಕೃಷ್ಣನಾಯ್ಕ್ ಎರಡು-ಮೂರು ವರ್ಷದ ಹಿಂದಷ್ಟೇ ಮನೆ ಕಟ್ಟಿ ಅದಕ್ಕೆ "ದೇವರ ಮನೆ" ಎಂದು ಹೆಸರಿಟ್ಟಿದ್ದರಂತೆ.
ರಾತ್ರಿ 8.30ಕ್ಕೆ ಬಾಗಿಲು ಹಾಕಿಕೊಂಡವರು ಬೆಳಗ್ಗೆವರೆಗೂ ತೆಗೆದಿರಲಿಲ್ಲ. ಪಕ್ಕದ ಮನೆಯವರು ಅನುಮಾನಗೊಂಡು ಬಾಗಿಲು ಒಡೆದಿದ್ದಾರೆ. ಆಗ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ.
ಮೃತನ ಮನೆಯ ಯಜಮಾನ ಕೃಷ್ಣ ನಾಯ್ಕ್ನ ಪತ್ನಿ ಸುಮಾ ಕಳೆದ ಒಂದು ವರ್ಷದಿಂದ ಪೈಲ್ಸ್ನಿಂದ ಬಳಲುತ್ತಿದ್ದಳು. ಆಸ್ಪತ್ರೆಗೆ ತೋರಿಸಿದ್ದರೂ ಹುಷಾರಾಗಿರಲಿಲ್ಲ.
ಕೆಲ ತಿಂಗಳ ಹಿಂದೆ ಕೃಷ್ಣನಾಯ್ಕ ಕೆಲಸವನ್ನೂ ಕಳೆದುಕೊಂಡು ಜೀವನ ನಿರ್ವಹಣೆ ಕಷ್ಟವಾಗಿತ್ತು. ಆಸ್ಪತ್ರೆಯ ಖರ್ಚು-ವೆಚ್ಚಕ್ಕೆ ಹೆದರಿದ ಕುಟುಂಬ, ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಧ್ರುವ ಎರಡನೇ ತರಗತಿಯಲ್ಲಿ ಓದುತ್ತಿದ್ದ. ನಗರದ ನಿಟ್ಟುವಳ್ಳಿಯಲ್ಲಿರುವ ಸಂಬಂಧಿಕರ ಮನೆಯಲ್ಲಿದ್ದ ಆತನನ್ನು ಭಾನುವಾರ ಸಂಜೆ ಮನೆಗೆ ಕರೆದುಕೊಂಡು ಬಂದಿದ್ದರು ಎಂದು ತಿಳಿದು ಬಂದಿದೆ.
ಪತ್ನಿ ಮತ್ತು ಮಗುವಿಗೆ ವಿಷ ಕುಡಿಸಿ ಬಳಿಕ ಕೃಷ್ಣನಾಯಕ್ ನೇಣು ಹಾಕಿಕೊಂಡಿದ್ದಾನೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ದಾವಣಗೆರೆ ಆರ್ಎಂಸಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.