ಅಣ್ಣನ ಸಾವಿನ ಸುದ್ದಿ ಕೇಳಿ ತಂಗಿಯೂ ವಿಧಿವಶ! | ಜನತಾ ನ್ಯೂಸ್
ರಾಯಚೂರು : ಅಣ್ಣನ ಮೃತಪಟ್ಟ ಸುದ್ದಿ ಕೇಳುತ್ತಿದ್ದಂತೆ ಆಘಾತಕ್ಕೀಡಾಗಿ ತಂಗಿಯೂ ಸಾವನಪ್ಪಿದ ಮನಕಲಕುವ ಘಟನೆ ತಾಲೂಕಿನ ಹುಣಸಿಹಾಳಹುಡಾದಲ್ಲಿ ಮಂಗಳವಾರ ಜರುಗಿದೆ.
ಹುಣಸಿಹಾಳಹುಡಾ ಗ್ರಾಮದ ನಿವಾಸಿ ನರಸಪ್ಪ ಹೀರಾ (65) ಅನಾರೋಗ್ಯ ಕಾರಣ ಸೋಮವಾರ ರಾತ್ರಿ ರಾಯಚೂರು ನಗರದ ನವೀನ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಅಣ್ಣನ ಅಗಲಿಕೆಯ ಸುದ್ದಿ ತಿಳಿದ ತಂಗಿ ಸಿದ್ದಮ್ಮ (50) ರಕ್ತದೊತ್ತಡ ಕಡಿಮೆಯಾಗಿ ಮೃತಪಟ್ಟಿದ್ದಾರೆ.
ಅನಾರೋಗ್ಯಕ್ಕೀಡಾದ ಅಣ್ಣನನ್ನು ಮಾತನಾಡಿಸಲೆಂದು ಸಿರವಾರದಿಂದ ಹುಣಸಿಹಾಳಹುಡಾ ಗ್ರಾಮಕ್ಕೆ ತಂಗಿ ಆಗಮಿಸಿದ್ದಳು. ಆದರೆ ಆಸ್ಪತ್ರೆಯಲ್ಲಿ ಅಣ್ಣ ಅಗಲಿದ್ದಾನೆಂಬ ಸುದ್ದಿ ತಿಳಿಯುತ್ತಿದ್ದಂತೆ ಅಣ್ಣನ ಮನೆಯಲ್ಲಿದ್ದ ಸಿದ್ದಮ್ಮ ಗಾಬರಿಗೊಂಡಿದ್ದಾಳೆ.
ಕ್ಷಣಾರ್ಧದಲ್ಲೇ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದು ರಕ್ತದೊತ್ತಡ ತೀವ್ರ ಕಡಿಮೆಯಾಗಿದೆ. ಆಸ್ಪತ್ರೆಗೆ ಕರೆದೊಯ್ಯಬೇಕು ಎನ್ನುವಷ್ಟರಲ್ಲಿ ಸಾವನ್ನಪ್ಪಿದ್ದಾಳೆ.
ಒಂದೇ ದಿನ ಇಬ್ಬರನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.