ಸರ್ಕಾರ ಪಾಪರ್ ಆಗಿದ್ದರೆ ಉಪನ್ಯಾಸಕರಿಗೆ ನಾನೇ ಸಂಬಳ ಕೊಡುತ್ತೀನಿ: ಹೆಚ್ಡಿ ರೇವಣ್ಣ | ಜನತಾ ನ್ಯೂಸ್
ಹಾಸನ : ರಾಜ್ಯ ಸರ್ಕಾರದ ತಾರತಮ್ಯ ನೀತಿ ಖಂಡಿಸಿ ಮಾಜಿ ಸಚಿವ ಎಚ್.ಡಿ. ರೇವಣ್ಣ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು. ಹಾಸನ ಪದವಿ ಕಾಲೇಜಿನಲ್ಲಿ ಹೊಸ ಕೋರ್ಸ್ ಆರಂಭಿಸುವುದಕ್ಕೆ ರಾಜ್ಯ ಸರಕಾರ ಒಪ್ಪಿಗೆ ನೀಡಿಲ್ಲದೇ ಇರುವುದನ್ನು ಖಂಡಿಸಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಏಕವ್ಯಕ್ತಿ ಪ್ರತಿಭಟನೆ ನಡೆಸಿದ್ದಾರೆ.
ಎಚ್.ಡಿ. ರೇವಣ್ಣರನ್ನು ಫೋನ್ ಮೂಲಕ ಸಂಪರ್ಕಿಸಿದ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಭಟನೆ ಕೈ ಬಿಡುವಂತೆ ಹೇಳಿದರು.
ನಂತರ ಮಾತನಾಡಿದ ಎಚ್.ಡಿ. ರೇವಣ್ಣ, ಕುಮಾರಸ್ವಾಮಿ ಅವರಿದ್ದ ಕಾಲದಲ್ಲಿ ಹೊಳೆನರಸೀಪುರ ಕಾಲೇಜಿಗೆ ಎರಡು ಸ್ನಾತಕೋತ್ತರ ಕೋರ್ಸ್ ಗೆ ಮೈಸೂರು ವಿವಿಯಿಂದ ಅನುಮತಿ ಕೊಡಲಾಗಿತ್ತು. ಆದರೆ ಉನ್ನತ ಶಿಕ್ಷಣ ಸಚಿವ ಸಿ.ಎನ್. ಅಶ್ವಥ್ ನಾರಾಯಣ್ ಇದನ್ನು ರದ್ದು ಮಾಡಿದ್ದಾರೆ. ನಮಗೆ ಕೊಟ್ಟ ಎಲ್ಲಾ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ ಎಂದು ಆರೋಪಿಸಿದರು.
ನಮಗೆ ಕೊಟ್ಟ ಎಲ್ಲ ಅನುದಾನ ಬಿಜೆಪಿ ಸರ್ಕಾರ ತಡೆ ಹಿಡಿದಿದೆ. ಬಡವರ ಮಕ್ಕಳು ಓದುವ ಕಾಲೇಜಿಗೆ ಯಾಕೆ ರಾಜಕೀಯ? ಉದ್ದೇಶಪೂರ್ವಕವಾಗಿ ಯಾಕೆ ಇದನ್ನು ಸಚಿವರು ತಿರಸ್ಕರಿಸಿದ್ದಾರೆ. ಸರ್ಕಾರ ಪಾಪರ್ ಬಿದ್ದಿದ್ದರೆ ನಾನೇ ಟೀಚರ್ಗೆ ಸಂಬಳ ಕೊಡುತ್ತೀನಿ. ಬೇಕಿದ್ದರೆ ಛಾಪಾ ಕಾಗದದ ಮೇಲೆ ಬರೆದುಕೊಡಲು ಸಿದ್ಧ ಎಂದು ತಿಳಿಸಿದ್ದಾರೆ.
ಖಾಸಗಿ ಕಾಲೇಜಿಗೆ ಅನುಮತಿ ಕೊಡಲು ಆಗುತ್ತದೆ. ಆದರೆ ಬಡವರ ಮಕ್ಕಳ ಕಾಲೇಜಿಗೆ ಅನುಮತಿ ಏಕೆ ಕೊಡುತ್ತಿಲ್ಲ? ನಾನೇ ಶಿಕ್ಷಕರಿಗೆ ಸಂಬಳ ಕೊಡುತ್ತೇನೆ. ಕೆಲವರಿಗೆ 300- 400 ಕೋಟಿ ನಿಯಮ ಮೀರಿ ಕೊಟ್ಟಿದ್ದಾರೆ. ನಾನು ಮಾತಾಡಿದರೆ ಎಲ್ಲೋ ಹೋಗುತ್ತೆ ಎಂದು ಗಂಭೀರ ಆರೋಪ ಮಾಡಿದರು.