ಬೆಂಗಳೂರು ಮಳೆ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಸಿಎಂ | JANATA NEWS
ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಸುರಿದ ರಣ ಮಳೆಯಿಂದ ಸಾವನಪ್ಪಿದ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು 5 ಲಕ್ಷ ರೂ. ಪರಿಹಾರವನ್ನು ಘೋಷಿಸಿದರು
ಇಂದು ಬೊಮ್ಮಾಯಿ ಅವರು ಹಾನಿ ಉಂಟಾದ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಮನೆಗಳಿಗೆ ನೀರು ನುಗ್ಗಿ ಅನಾಹುತರಾದ ಕುಟುಂಬಸ್ಥರಿಗೆ ತಲಾ 25 ಸಾವಿರ ರೂಪಾಯಿ ಹಾಗೂ ನಿನ್ನೆ ಮಳೆಗೆ ಉಲ್ಲಾಳ ಸಮೀಪ ಪೈಪ್ ಲೈನ್ ನಲ್ಲಿ ಸಿಲುಕಿ ಮೃತಪಟ್ಟ ಇಬ್ಬರು ಕಾರ್ಮಿಕರ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಳೆ ಜಾಸ್ತಿಯಾದಾಗ ತಗ್ಗು ಪ್ರದೇಶಗಳಿಗೆ ನೀರು ಬರುತ್ತದೆ. ಇಲ್ಲಿನ ಭೌಗೋಳಿಕವಾಗಿ ಜಾಗವು ಹಾಗೆಯೇ ಇದೆ. ಒಟ್ಟಾರೆಯಾಗಿ 10ರಿಂದ 15 ಮನೆಗಳಿಗೆ ನೀರು ನುಗ್ಗಿದೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುತ್ತೇವೆ. ಆದರೆ ಕೆಲವೊಂದು ಕಡೆ ರಾಜಕಾಲುವೆ ನೀರು ಒಂದೇ ಕಡೆ ನಿಲ್ಲುತ್ತದೆ. ಇದಕ್ಕೆ ಪರಿಹಾರವೆಂದರೆ ರಾಜಕಾಲುವೆ ನೀರನ್ನು ಹೊರಗಡೆಗೆ ತಿರುಗಿಸಬೇಕು ಎಂದರು.
ತಗ್ಗು ಪ್ರದೇಶಗಳಲ್ಲಿ, ಕೆರೆಗಳನ್ನು ಒತ್ತುವರಿ ಮಾಡಿ ಅಲ್ಲಿ ಮನೆಗಳನ್ನು ಕಟ್ಟಿಕೊಂಡಿರುವುದನ್ನು ಪತ್ತೆ ಹಚ್ಚುತ್ತೇವೆ. ಮುಖ್ಯ ಕಾಲುವೆ ಜೊತೆಗೆ ಎರಡನೇ ಕಾಲುವೆಗಳನ್ನು ಪತ್ತೆಹಚ್ಚಿ ವಾರ್ಡ್ ಗಳಲ್ಲಿರುವ ಚರಂಡಿಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುತ್ತೇವೆ. ರಾಜಕಾಲುವೆ 800 ಕಿಲೋ ಮೀಟರ್ ಇವೆ, ಈಗ 400 ಕಿಲೋ ಮೀಟರ್ ಕಾಮಗಾರಿ ಕೈಗೊಳ್ಳುತ್ತೇವೆ ಎಂದರು.