ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ಸರ್ಕಾರ ಚಿಂತನೆ | JANATA NEWS
ಬೆಂಗಳೂರು : ರಾಜ್ಯದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈಗ ಕಂದಾಯ ನಿವೇಶನಗಳಿಗೆ, ಅಂತಹ ನಿವೇಶನಗಳಲ್ಲಿ ಮನೆ ನಿರ್ಮಿಸಲು ಬ್ಯಾಂಕ್ ಸಾಲ ದೊರೆಯುವುದಿಲ್ಲ. ಈಗ ಕಂದಾಯ ನಿವೇಶನಗಳ ಭೂ ಪರಿವರ್ತನೆಗೆ ಅವಕಾಶ ನೀಡಿದರೆ, ನಿವೇಶನ ಮತ್ತು ಕಟ್ಟಡಗಳ ಮಾಲೀಕರಿಗೆ ಬ್ಯಾಂಕ್ ಸಾಲ ಪಡೆಯಲು ಅವಕಾಶವಾಗುತ್ತದೆ.
ಹೀಗಾಗಿ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆ ಮಾಡಿಸಿಕೊಳ್ಳಲು ಅನುಮತಿ ನೀಡುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಕಾಯ್ದೆಯಲ್ಲಿ ಇದಕ್ಕೆ ಅವಕಾಶ ಕಲ್ಪಿಸಲು ಸಾಧ್ಯವಿದ್ದರೆ ನಿಶ್ಚಿತವಾಗಿಯೂ ಅವಕಾಶ ಕಲ್ಪಿಸುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಭೂ ಪರಿವರ್ತನೆ ಕೋರಿ ಅರ್ಜಿ ಸಲ್ಲಿಸುವವರಿಂದ ಪ್ರಮಾಣ ಪತ್ರ ಪಡೆದು ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯವನ್ನು ಮಾಡಿಕೊಡಲಾಗುತ್ತದೆ. ಒಂದು ವೇಳೆ ಸದರಿ ಭೂಮಿ ದಲಿತರಿಗೆ ಸಂಬಂಧಿಸಿದ್ದು ಎಂಬುದರಿಂದ ಹಿಡಿದು ಯಾವುದೇ ತೊಡಕುಗಳಿದ್ದರೆ ತಕ್ಷಣವೇ ಗೊತ್ತಾಗುತ್ತದೆ.
ಹೀಗಾಗಿ ತೊಡಕುಗಳಿಲ್ಲದ ಅರ್ಜಿಯ ಆಧಾರದ ಮೇಲೆ ಒಂದು ವಾರದಲ್ಲಿ ಭೂ ಪರಿವರ್ತನೆ ಕಾರ್ಯ ನಡೆಯಲಿದೆ ಎಂದು ಸಚಿವರು ಹೇಳಿದರು. ಒಂದು ವೇಳೆ ಈ ಕಾರ್ಯದಲ್ಲಿ ವಿಳಂಬವಾದರೆ, 15 ದಿನಗಳಲ್ಲಿ ಆಯಾ ಜಿಲ್ಲಾಧಿಕಾರಿಗಳ ಹೆಸರಿನಲ್ಲಿ ಈ ಭೂ ಪರಿವರ್ತನೆ ಕಾರ್ಯ ಪೂರ್ಣವಾಗಲಿದೆ.