ಚಂದ್ರಯಾನ-3 ಯಶಸ್ವಿ : ವಿಜ್ಞಾನಿ ಹಾಗೂ ಎಲ್ಲಾ ಭಾರತೀಯರಿಗೆ ಶುಭಾಶಯ ಹೇಳಿದ ಪ್ರಧಾನಿ ಮೋದಿ | JANATA NEWS
ಬೆಂಗಳೂರು : ಭಾರತೀಯರ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ-ಇಸ್ರೋದ ಕನಸಿನ ಯೋಜನೆಯಾದ ಚಂದ್ರಯಾನ-3 ತನ್ನ ಚಂದ್ರನ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಮತ್ತು ಅದರ ವಿಕ್ರಮ್ ರೋವರ್ ಇಂದು ಆಗಸ್ಟ್ 23 ರಂದು ಸಂಜೆ 6.04 ಕ್ಕೆ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಿತು.
ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಆಫ್ರಿಕಾದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಅದ್ಭುತ ಕ್ಷಣದಲ್ಲಿ ಇಸ್ರೋ ತಂಡವನ್ನು ಸೇರಿಕೊಂಡರು.
ಸಾಫ್ಟ್ ಲ್ಯಾಂಡಿಂಗ್ ನಂತರ, ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನದ ವಿಕ್ರಮ್ ಲ್ಯಾಂಡರ್ ಯಶಸ್ವಿ ಲ್ಯಾಂಡಿಂಗ್ ಕುರಿತು ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಬಳಿಕ ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಇಸ್ರೋವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ವಿಜ್ಞಾನಿಗಳನ್ನು ಅಭಿನಂದಿಸುತ್ತಾ, “ಈ ಹಿಂದೆ ಯಾವುದೇ ದೇಶವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿಲ್ಲ. ನಮ್ಮ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ ನಾವು ಅಲ್ಲಿಗೆ ತಲುಪಿದ್ದೇವೆ. ಭಾರತದ ಯಶಸ್ವಿ ಚಂದ್ರಯಾನ ಕೇವಲ ಭಾರತ ಮಾತ್ರವಲ್ಲ... ಈ ಯಶಸ್ಸು ಎಲ್ಲ ಮಾನವೀಯತೆಗೂ ಸೇರಿದೆ.
ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವುದು ನವಭಾರತದ ಉದಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. "ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವ ಭಾರತದ ಉದಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.