9 ವರ್ಷ ಪ್ರೀತಿಸಿ, ಮದುವೆಯಾಗಿ ಕೈಕೊಟ್ಟ ಪ್ರಿಯಕರ; ಯುವಕನ ಮನೆ ಎದುರು ಯುವತಿಯ ಧರಣಿ | ಜನತಾ ನ್ಯೂಸ್
ಕೋಲಾರ : ಪ್ರೀತಿಸಿ ಮದುವೆಯಾಗಿ ಕೈಕೊಟ್ಟ ಪ್ರಿಯಕರನ ಮನೆ ಎದುರು ಯುವತಿಯ ಏಕಾಂಗಿ ಧರಣಿ ನಡೆಸುತ್ತಿರುವ ಘಟನೆ ಕೋಲಾರ ತಾಲೂಕಿನ ಅರಾಬಿಕೊತ್ತನೂರು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಮಹೇಶ್ ಹಾಗೂ ಅದೇ ಅರಾಬಿಕೊತ್ತನೂರು ಗ್ರಾಮದ ಅಂಬಿಕಾ ಕಳೆದ 9 ವರ್ಷದಿಂದ ಪರಸ್ಪರ ಪ್ರೀತಿ-ಪ್ರೇಮವೆಂದು ಒಡಾಡಿದ್ದಾರೆ. ಅಂಬಿಕಾ ಒತ್ತಾಯಕ್ಕೆ ಕಳೆದ ಒಂದು ವಾರದ ಹಿಂದೆಯಷ್ಟೆ ಮಹೇಶ್ ಮನೆಯಲ್ಲೆ ಮದುವೆಯಾಗಿದ್ದಾನೆ.
ಬಳಿಕ ಮನೆಗೆ ಕರೆದೊಯ್ಯುವಂತೆ ಅಂಬಿಕಾ ಕೇಳುತ್ತಿದ್ದರೂ ಸತಾಯಿಸಲು ಆರಂಭಿಸಿದ್ದಾನೆ. ಅಷ್ಟೇ ಅಲ್ಲದೆ ಪೋಷಕರು ಹೇಳಿದಂತೆ ಬೇರೊಬ್ಬ ಯುವತಿಯನ್ನ ಮದುವೆಯಾಗಲು ಮಹೇಶ್ ಮುಂದಾಗಿದ್ದಾನೆ.
ಈ ವಿಚಾರ ತಿಳಿದ ಅಂಬಿಕಾ ಕಳೆದ ಮೂರು ದಿನದಿಂದ ಮಹೇಶ್ ನಿವಾಸದ ಎದುರು ಧರಣಿ ಕುಳಿತಿದ್ದಾಳೆ. ಮನೆ ಎದುರು ಅಂಬಿಕಾ ಧರಣಿ ಕೂರುವ ಮಾಹಿತಿ ತಿಳಿದಿರುವ ಮಹೇಶ್ ಗ್ರಾಮದಿಂದಲೇ ನಾಪತ್ತೆಯಾಗಿದ್ದಾನೆ.
ಇಬ್ಬರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, 9 ವರ್ಷಗಳ ಹಿಂದೆಯೇ ಪರಿಚಯವಾಗಿತ್ತು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿತ್ತು. ಇಷ್ಟ ಪಟ್ಟಿದ್ದರಿಂದಲೇ ಲೈಂಗಿಕವಾಗಿ ಬಳಸಿಕೊಂಡು ಮಹೇಶ್ ನನಗೆ ಮೋಸ ಮಾಡುತ್ತಿದ್ದಾನೆಂದು ನೊಂದ ಅಂಬಿಕಾ ಆರೋಪಿಸಿದ್ದಾರೆ.
ಪ್ರೀತಿಸಿ ವಂಚನೆ ಮಾಡಲು ಹೊರಟಿರುವ ಮಹೇಶ್ ವಿರುದ್ದ ಈಗಾಗಲೇ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುವ ಅಂಬಿಕಾ, ಜೊತೆಗೆ ಫೋಟೋಗಳನ್ನ ಪೊಲೀಸರಿಗೆ ದಾಖಲೆಯಾಗಿ ನೀಡಿದ್ದೇನೆ ಎಂದಿದ್ದಾಳೆ, ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದಾರೆ. ಮಹಿಳಾ ಸಾಂತ್ವಾನ ಕೇಂದ್ರಕ್ಕೂ ದೂರು ನೀಡಿದ್ದು, ಮಹೇಶ್ ಜೊತೆಗೆ ಜೀವನ ನಡೆಸಲು ಅವಕಾಶ ನೀಡುವಂತೆಯೂ ಮನವಿಯನ್ನು ಅಂಬಿಕಾ ಸಲ್ಲಿಸಿದ್ದಾರೆ.
ಯುವತಿಯನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮಹೇಶ್ ಪೋಷಕರು, ಮಹೇಶ್ ಜೊತೆಗೆ ಸಲುಗೆಯಿಂದ ಇದ್ದದ್ದು ನಿನ್ನದೆ ತಪ್ಪು, ಪೊಲೀಸ್ ಠಾಣೆಗೆ ದೂರು ನೀಡಿ, ಯಾವ ಕಾರಣಕ್ಕೆ ಪ್ರತಿಭಟನೆ ಮಾಡಲು ಬಂದಿದ್ದೀಯಾ? ನ್ಯಾಯಾಲಯದಲ್ಲೇ ಪ್ರಕರಣ ಇತ್ಯರ್ಥ ಮಾಡಿಕೋ ಎನ್ನುತ್ತಾ ಸ್ಥಳದಿಂದ ಹೋಗುವಂತೆ ಒತ್ತಡ ಹಾಕುತ್ತಿದ್ದಾರೆ ಎಂದಿದ್ದಾಳೆ.