ಆಕ್ಸಿಜನ್ ದುರಂತ ನಡೆದ ಸಂದರ್ಭದಲ್ಲಿ ಇಲ್ಲಿಗೆ ಯಡಿಯೂರಪ್ಪ ಭೇಟಿ ನೀಡಬೇಕಿತ್ತು, ಆದರೆ ಅವರಿಗೆ ಭಯ!
ಚಾಮರಾಜನಗರ : ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮೇ 2 ರಂದು ಆಕ್ಸಿಜನ್ ಕೊರತೆ ದುರಂತದಲ್ಲಿ ಮೃತಪಟ್ಟವರ 36 ಕುಟುಂಬಗಳಿಗೂ ಕೆಪಿಸಿಸಿ ವತಿಯಿಂದ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ.
ಚಾಮರಾಜನಗರ ಜಿಲ್ಲೆಗೆ ಪ್ರತಿ ಭೇಟಿ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೃತರ ಪ್ರತಿ ಕುಟುಂಬವನ್ನು ಭೇಟಿ ಮಾಡಿ ಸಾಂತ್ವನ ಹೇಳಿ ತಲಾ ಒಂದು ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ. ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಗಳನ್ನು ಅವರ ಗ್ರಾಮಗಳಿಗೇ ತೆರಳಿ ಭೇಟಿ ಮಾಡುತ್ತಿರುವ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಸಾಥ್ ನೀಡಿದ್ದಾರೆ.
ಆಕ್ಸಿಜನ್ ದುರಂತದಲ್ಲಿ ಮಡಿದವರ ಕುಟುಂಬಸ್ಥರನ್ನು ಭೇಟಿ ಮಾಡಿದ ಬಳಿಕ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಆರೋಗ್ಯ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಜಿಲ್ಲಾಡಳಿತದ ಅಧಿಕಾರಿಗಳ ವಿರುದ್ಧ ಕೊಲೆ ಕೇಸ್ ದಾಖಲಿಸಿ ಎಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು.
ದುರಂತ ನಡೆದ ಸಂದರ್ಭದಲ್ಲಿ ಇಲ್ಲಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಭೇಟಿ ನೀಡಬೇಕಿತ್ತು. ಆದರೆ ಇಲ್ಲಿಗೆ ಭೇಟಿ ನೀಡಲು ಅವರಿಗೆ ಭಯವಾಗಿದೆ, ಜನರು ಆಕ್ರೋಶಗೊಂಡಿದ್ದಾರೆ ಎಂದು ಗೊತ್ತಾಗಿದೆ. ರೊಚ್ಚಿಗೆದ್ದು ಹೊಡೆಯುತ್ತಾರೆ ಎಂದು ಅವರಿಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ. ಹಾಗಾಗಿಯೇ ಭೇಟಿ ನೀಡಿಲ್ಲ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ದೇಶದಲ್ಲೇ ದೊಡ್ಡ ಘಟನೆಯಾದರೂ ಇದರ ಜವಾಬ್ದಾರಿಯನ್ನು ಯಾರೂ ಹೊತ್ತಿಲ್ಲ. ಇದಕ್ಕೆ ಹೊಣೆಗಾರರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ಈ ರೀತಿಯ ಕಣ್ಣು, ಕಿವಿ, ಹೃದಯವಿಲ್ಲದ ಸರ್ಕಾರ ಯಾವುದಕ್ಕೆ ಬೇಕು, ನಾನು ಇಂದು ಭೇಟಿ ಮಾಡಿದವರ ವಿಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸಿಎಂ, ಜಿಲ್ಲಾ ಉಸ್ತುವಾರಿ ಸಚಿವರಿಗೆ ಟ್ಯಾಗ್ ಮಾಡುತ್ತೇನೆ ಎಂದರು
36 ಮಂದಿ ಮೃತಪಟ್ಟರೂ ಯಾವ ಬಿಜೆಪಿ ಸಚಿವನೂ ಮೃತರ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಲಿಲ್ಲ. ಅವರಿಗೆ ಬೆಂಗಳೂರಿನಲ್ಲಿ ತಮಗೆ ಆ ಜವಾಬ್ದಾರಿ ಬೇಕು ಈ ಜವಾಬ್ದಾರಿ ಬೇಕು ಎಂದು ಪಾಲು ಮಾಡಿಕೊಳ್ಳುತ್ತಿದ್ದಾರೆ. ಅವರಿಗೆ ಈ ಜವಾಬ್ದಾರಿ ಬೇಡವಾಗಿದೆ. ಯಡಿಯೂರಪ್ಪನವರಿಗೆ ಸಿಎಂ ಕುರ್ಚಿಯೇ ಮುಖ್ಯವಾಗಿದೆ ಎಂದ ಅವರು, ಈ ಘಟನೆಯಲ್ಲಿ ಸಿಎಂ ತಲೆ ದಂಡವೇ ಆಗಬೇಕಿತ್ತು. ಆದರೆ ಜನರ ತಲೆದಂಡ ಆಗಿದೆ ಎಂದರು.
ಕೊರೊನಾದಿಂದ ಮೃತಪಟ್ಟವರ ಮನೆಗಳಿಗೆ ಕಾಂಗ್ರೆಸ್ ಕಾರ್ಯಕರ್ತರು ತೆರಳಿ ಒಂದು ವರದಿ ತಯಾರಿಸಿ ಆಯಾ ತಹಶೀಲ್ದಾರ್, ಜಿಲ್ಲಾಧಿಕಾರಿಗೆ ಸಲ್ಲಿಸಿ ಜನರ ಧ್ವನಿಯಾಗಿ ನ್ಯಾಯ ಕೊಡಿಸುತ್ತೇವೆ, ಸಂಪೂರ್ಣ ವರದಿಯನ್ನು ನ್ಯಾಯಾಲಯಕ್ಕೆ ಮತ್ತು ಅಸೆಂಬ್ಲಿಯಲ್ಲಿ ಪ್ರಸ್ತುತ ಪಡಿಸಲಾಗುವುದು ಎಂದು ತಿಳಿಸಿದರು.