ಕಾಂಗ್ರೆಸ್ನಲ್ಲಿ ಹೊಂದಾಣಿಕೆ ರಾಜಕಾರಣವಿಲ್ಲ: ಡಿ.ಕೆ.ಸುರೇಶ್ | ಜನತಾ ನ್ಯೂಸ್
ಹಾಸನ : ಹೋರಾಟದ ಪಕ್ಷವಾದ ಕಾಂಗ್ರೆಸ್ನಲ್ಲಿ ಹೊಂದಾಣಿಕೆ ರಾಜಕಾರಣವಿಲ್ಲ. ಅಧಿಕಾರ ಇರಲಿ, ಇಲ್ಲದಿರಲಿ ಯಾರಿಗೂ ಶರಣಾಗುವುದಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು.
ಅಗತ್ಯ ವಸ್ತುಗಳ ಬೆಲೆಯೇರಿಕೆ ವಿರೋಧಿಸಿ ಸರ್ಕಾರದ ವಿರುದ್ಧ ಸೈಕಲ್ ಜಾಥಾದಲ್ಲಿ ಪಾಲ್ಗೊಂಡು ನಂತರ ಮಾತನಾಡಿದ ಅವರು, ಜನಪ್ರತಿನಿಧಿಯಾಗಿ ಸುಮಲತಾ ಅವರು ಪ್ರಶ್ನೆ ಮಾಡಿದ್ದಾರೆ. ಈಗ ಅದು ಬೇರೆ ಬೇರೆ ಸ್ವರೂಪ ಪಡೀತಿದೆ. ತಕ್ಷಣ ಈ ಬಗ್ಗೆ ಟೆಕ್ನಿಕಲ್ ಟೀಂ ಬಂದು ತನಿಖೆ ಮಾಡಲಿ. ಅಕ್ರಮ ಗಣಿಗಾರಿಕೆ ಬಗ್ಗೆ ಏನೇ ತನಿಖೆ ಮಾಡಿದರೂ ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ಹೈಕಮಾಂಡ್ ತೀರ್ಮಾನವೇ ಅಂತಿಮ. ಚುನಾವಣೆ ನಂತರ ಶಾಸಕರು ಹಾಗೂ ಮುಖಂಡರು ಯಾರನ್ನು ನಿರ್ಧರಿಸುತ್ತಾರೆ ಅವರೇ ಸಿ.ಎಂ. ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶವಿಲ್ಲ. ಎಲ್ಲ ಪಕ್ಷದಲ್ಲೂ ಮುಖ್ಯಮಂತ್ರಿ ಆಯ್ಕೆ ವಿಚಾರ ಚರ್ಚೆಯಲ್ಲಿ ಇರುತ್ತದೆ. ಯಾವುದೇ ಜಿಲ್ಲೆಗೆ ಹೋದರೂ ಅಲ್ಲಿ ಅವರು ತಮಗೆ ಬೇಕಾದವರು ಮುಖ್ಯಮಂತ್ರಿ ಅಗಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ ಎಂದರು.
ಕಾಂಗ್ರೆಸ್ ಪಕ್ಷದ ವತಿಯಿಂದ ಜುಲೈ 1 ರಿಂದ 31 ರವರೆಗೆ "ಸಹಾಯಸ್ತ" ಕಾರ್ಯಕ್ರಮ ಹಮ್ಮಿಕೊಂಡಿದ್ದು, ಮೃತರ ಮನೆಗಳಿಗೆ ಭೇಟಿ ಮಾಡಿ ಯಾವ ಕಾರಣಕ್ಕಾಗಿ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರಿಂದ ಮಾಹಿತಿ ಸಂಗ್ರಹಿಸಿ ಸರ್ಕಾರ ಹಾಗೂ ಜಿಲ್ಲಾಧಿಕಾರಿಗೆ ವರದಿ ನೀಡಿ, ಪರಿಹಾರ ಕೊಡಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಎ.ಮಂಜು ಕಾಂಗ್ರೆಸ್ ಪಕ್ಷ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಮರಳಿ ಪಕ್ಷ ಸೇರ ಬಯಸುವವರು ಅರ್ಜಿ ಹಾಕಿಕೊಳ್ಳಲಿ. ಅಧಿಕಾರಕ್ಕಾಗಿ ಪಕ್ಷದಿಂದ ಹೊರ ಹೋದವರು ಮತ್ತೆ ಪಕ್ಷಕ್ಕೆ ಸೇರಬೇಕಾದರೆ ಅದಕ್ಕಾಗಿಯೇ ಒಂದು ನೋಡಲ್ ಸಮಿತಿ ರಚಿಸಲಾಗಿದೆ. ಪಕ್ಷದ ತತ್ವ ಸಿದ್ದಾಂತ ಒಪ್ಪಿ ನಡೆದುಕೊಳ್ಳುವುದಾದರೆ ಬರಬಹುದು. ಅಧಿಕಾರದ ಆಸೆಯಿಂದ ಪಕ್ಷಕ್ಕೆ ಬರುವವರಿಗೆ ಪಕ್ಷದಲ್ಲಿ ಅವಕಾಶವಿಲ್ಲ ಎಂದರು.
ಕುಮಾರಸ್ವಾಮಿ, ಸುಮಲತಾ ಇಬ್ಬರೂ ದೊಡ್ಡ ನಾಯಕರಿದ್ದಾರೆ. ಅವರ ಬಗ್ಗೆ ಚರ್ಚೆ ಮಾಡಲ್ಲ. ನನಗೆ ಕುಮಾರಸ್ವಾಮಿ, ಸುಮಲತಾ ಎಲ್ಲರ ಬಗ್ಗೆಯೂ ಸಾಫ್ಟ್ ಕಾರ್ನರ್ ಇದೆ. ಆದರೆ ಕೆ ಆರ್ ಎಸ್ ಬಿರುಕು ಬಿಟ್ಟಿದೆ ಎಂಬ ಪ್ರಶ್ನೆ ಆತಂಕ ಉಂಟುಮಾಡುವಂತದ್ದಾಗಿದೆ. ಅದನ್ನು ನಿವಾರಿಸುವ ಹೊಣೆ ರಾಜ್ಯ ಸರ್ಕಾರದ್ದಾಗಿದೆ. ಕೆ ಆರ್ ಎಸ್ ನಮ್ಮ ರಾಜ್ಯದ ಆಸ್ತಿಯಾಗಿದೆ. ಎರಡು ರಾಜ್ಯದ ರಾಜಕಾರಣ ಕೆ ಆರ್ ಎಸ್ ಮೇಲೆ ನಡೆಯುತ್ತಿದೆ. ಇದು ನಮಗೆ ಪ್ರತಿಷ್ಠೆಯ ಪ್ರಶ್ನೆ. ಹೀಗಾಗಿ ಕೆ ಆರ್ ಎಸ್ ಅಣೆಕಟ್ಟೆ ಬಿರುಕಿನ ಬಗ್ಗೆ ತನಿಖೆ ಮಾಡಿಸಿ ಜನರ ಆತಂಕ ನಿವಾರಿಸಬೇಕಿದೆ ಎಂದು ಡಿಕೆ.ಸುರೇಶ್ ಹೇಳಿದ್ದಾರೆ.