ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ; ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ: ಕಟೀಲ್ | ಜನತಾ ನ್ಯೂಸ್
ಉಡುಪಿ : ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ. ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಉಡುಪಿಯ ಸಣ್ಣಕ್ಕಿಬೆಟ್ಟು ಎಂಬಲ್ಲಿ ನಡೆದ ಕೇದಾರೋತ್ಥಾನ ಟ್ರಸ್ಟ್ನ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತ ಅವರು ತಮ್ಮ ರಾಜಕೀಯ ಜೀವನದ ಕೆಲವೊಂದು ವಿಚಾರಗಳ ಕುರಿತು ಹೇಳಿಕೊಂಡರು. ಈ ಸಂದರ್ಭದಲ್ಲಿ ಅವರು ತಾವು ರಾಜಕಾರಣದಲ್ಲಿ ಖುಷಿ ಕಂಡಿಲ್ಲ, ರಾಜಕೀಯಕ್ಕೆ ಬರುವ ಇಚ್ಛೆಯೂ ಇರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ.
ನಾನು ರಾಜಕಾರಣದಲ್ಲಿ ಖುಷಿ ಕಂಡವ ಅಲ್ಲ, ರಾಜಕೀಯಕ್ಕೆ ಬರಬೇಕೆಂದು ಬಯಸಿ ಬಂದವನಲ್ಲ. ಅಷ್ಟಕ್ಕೂ ನನಗೆ ರಾಜಕೀಯಕ್ಕೆ ಬರುವ ಇಚ್ಛೆ ಇರಲಿಲ್ಲ. ಜೀವನದಲ್ಲಿ ಕೃಷಿಕನಾಗಿ ಇರಬೇಕು ಎಂದು ಬಯಸಿದ್ದೆ. ಆದರೆ ಹಿರಿಯರ ಅಪೇಕ್ಷೆಯಂತೆ ರಾಜಕೀಯಕ್ಕೆ ಬಂದಿದ್ದೇನೆ. ಭಗವಂತ ಕೆಲವೊಮ್ಮೆ ಒಳ್ಳೆಯದು ಬರೆಯುತ್ತಾನೆ, ನನ್ನ ಹಣೆಯಲ್ಲಿ ಒಳ್ಳೆಯದನ್ನು ಬರೆದಿದ್ದಾನೆ ಎಂದು ನಳಿನ್ಕುಮಾರ್ ಕಟೀಲ್ ಹೇಳಿಕೊಂಡಿದ್ದಾರೆ.
ರೈತರ ಸಾಲ ಮನ್ನಾ ಮಾಡಿದ ಮೊದಲ ಮುಖ್ಯಮಂತ್ರಿ ಯಡಿಯೂರಪ್ಪ. ನರೇಂದ್ರ ಮೋದಿ ರೈತರಿಗೆ ಕಿಸಾನ್ ಸಮ್ಮಾನ್ ಮೂಲಕ 6,000 ರೂ. ಪ್ರೋತ್ಸಾಹ ಧನ ಕೊಟ್ಟರು. ಇದು ಕಡಿಮೆ ಆಯಿತು ಎಂದು 4,000 ರೂ. ಹೆಚ್ಚುವರಿ ಕೊಟ್ಟವರು ಯಡಿಯೂರಪ್ಪ.
ಕೃಷಿಗೆ ಪ್ರಧಾನ ಆದ್ಯತೆ ಕೊಟ್ಟಿರುವುದು ಬಿಜೆಪಿ ಸರ್ಕಾರ. ಈ ರಾಜ್ಯದಲ್ಲಿ ಮೊದಲ ರೈತರ ಬಜೆಟ್ ಮಂಡನೆ ಮಾಡಿದವರು ಯಡಿಯೂರಪ್ಪ. ರೈತ ಗೀತೆಗೆ ಗೌರವ ಕೊಟ್ಟವರು ಯಡಿಯೂರಪ್ಪ ಎಂದು ಕಟೀಲ್ ಮುಖ್ಯಮಂತ್ರಿ ಬಿಎಸ್ವೈಯನ್ನು ಹೊಗಳಿದ್ದಾರೆ.