ಮಂಗಗಳ ಮಾರಣಹೋಮ ಪ್ರಕರಣ: ಸಿಕ್ಕಿ ಬಿದ್ದ ಆರೋಪಿಗಳು | ಜನತಾ ನ್ಯೂಸ್
ಹಾಸನ : ಬೇಲೂರು ತಾಲ್ಲೂಕು ಚೌಡನಹಳ್ಳಿಯಲ್ಲಿ ಜುಲೈ 28 ರ ರಾತ್ರಿ ನಡೆದಿದ್ದ ಮಂಗಗಳ ಹತ್ಯೆ ಪ್ರಕರಣವನ್ನು ಪೊಲೀಸ್ ಹಾಗೂ ಅರಣ್ಯ ಇಲಾಖೆ ಭೇದಿಸಿದ್ದು, ಉಸಿರುಗಟ್ಟಿ 38 ಮಂಗಗಳು ಸಾವನ್ನಪ್ಪಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಹಾಸನ ತಾಲ್ಲೂಕಿನ ಉಗನೆ, ಕ್ಯಾತನಹಳ್ಳಿ ಗ್ರಾಮಗಳಲ್ಲಿ ಕೋತಿಗಳು ಕಾಟ ಕೊಡುತ್ತಿವೆ ಎಂದು ಅವುಗಳನ್ನು ಸಾಮೂಹಿಕವಾಗಿ ಉಪಾಯದಿಂದ ಹಿಡಿದು ಸ್ಥಳಾಂತರ ಮಾಡುವ ಸಂದರ್ಭದಲ್ಲಿ ಉಸಿರುಗಟ್ಟಿ ಮೃತಪಟ್ಟಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಪ್ರಕರಣ ಸಂಬಂಧ ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಟಿ ನಡೆಸಿ ಜಿಲ್ಲಾಧಿಕಾರಿ ಆರ್.ಗಿರೀಶ್, ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ ಗೌಡ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ್ ಮಾಹಿತಿಯನ್ನು ನೀಡಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸ್ಗೌಡ ಮಾತನಾಡಿ, ಕೋತಿಗಳನ್ನು ಹಿಡಿಯುವ ಬಾಣಾವರದ ದಂಪತಿಯನ್ನು ಸುಮಾರು ₹ 40 ಸಾವಿರ ಹಣ ನೀಡಿ ಉಗನೆ ಗ್ರಾಮಕ್ಕೆ ಕರೆಸಿಕೊಳ್ಳಲಾಗಿತ್ತು.
ದಂಪತಿ ಒಂದು ವಾರ ಕೋತಿಗಳಿಗೆ ಬ್ರೆಡ್, ಬಿಸ್ಕೆಟ್ ಹಾಕಿ ಪಳಗಿಸಿ ಕೊನೆಗೆ, ಕೊನೆಗೆ ಜು.28ರಂದು ಕೋತಿಗಳನ್ನು ಸೆರೆ ಹಿಡಿದು, ಅವುಗಳನ್ನು ಗೋಣಿ ಚೀಲಗಳಲ್ಲಿ ಹಾಕಿ ವಾಹನದಲ್ಲಿ ಸಾಗಿಸುತ್ತಿದ್ದಾಗ, ಉಸಿರುಗಟ್ಟಿ ಮೃತಪಟ್ಟಿವೆ. 50 ಕ್ಕೂ ಹೆಚ್ಚು ಮಂಗಗಳನ್ನು ಒಂದೇ ಚೀಲನಲ್ಲಿ ತುಂಬಿ ಸಾಗಿಸುವ ವೇಳೆ 38 ಮಂಗ ಮೃತಪಟ್ಟಿದ್ದರೆ, 15 ಮಂಗಗಳು ಓಡಿ ಹೋಗಿವೆ ಎಂದು ಪೊಲೀಸರ ಮುಂದೆ ವಿಚಾರಣೆ ವೇಳೆ ಹೇಳಿದ್ದಾರೆ. ಮೃತಪಟ್ಟಿದ್ದ ಕೋತಿಗಳನ್ನು ಬೇಲೂರು ತಾಲ್ಲೂಕಿನ ಚೌಡನಹಳ್ಳಿ ಎಂಬಲ್ಲಿ ಬಿಸಾಡಿ ಹೋಗಿದ್ದರು.
ಐವರು ಬಂಧಿಸುವಲ್ಲಿ ಹಾಸನ ಪೋಲಿಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು, ರಾಮು ,ಯಶೋಧ, ವಾಹನ ಚಾಲಕ ಮಂಜು, ಉಗರೆ ಗ್ರಾಮದ ಪ್ರಸನ್ನ ಹಾಗೂ ಜಮೀನು ಮಾಲೀಕನನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.