ವಾಂತಿ ಮಾಡಲು ಹೋದ ಮಹಿಳೆ ಬಸ್ನಿಂದ ಬಿದ್ದು ಸಾವು! | ಜನತಾ ನ್ಯೂಸ್
ಚಾಮರಾಜನಗರ : ಕೆಎಸ್ಆರ್ಟಿಸಿ ಬಸ್ಸಿನ ಬಾಗಿಲು ಬಳಿ ನಿಂತು ವಾಂತಿ ಮಾಡಲು ಹೋದ ಮಹಿಳೆ ಆಯತಪ್ಪಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ಗುರುವಾರ ಸಂಭವಿಸಿದೆ.
ತಾಲೂಕಿನ ಮಲೆ ಮಹದೇಶ್ವರಬೆಟ್ಟ ಸಮೀಪದ ಹಳೆಯೂರು ಗ್ರಾಮದ ಕುಳ್ಳಮಾದಿ(50) ಎಂಬಾಕೆ ಮೃತ ದುರ್ದೈವಿಯಾಗಿದ್ದು, ಈಕೆ ಗುರುವಾರ(ಆಗಸ್ಟ್ 5) ಸಂಜೆ ಮಲೆ ಮಹದೇಶ್ವರಬೆಟ್ಟದಿಂದ ವಡಕೆಹಳ್ಳ ಗ್ರಾಮದ ಸಂಬಂಧಿಕರ ಮನೆಯತ್ತ ಹೊರಡಲು ಕರಾರಸಾಸಂ ಬಸ್ಸು ಹತ್ತಿದ್ದರು.
ಈ ಬಸ್ ಮೈಸೂರು ಹಾಗೂ ಕೆ.ಆರ್. ಪೇಟೆ ಮಾರ್ಗದತ್ತ ಹೊರಟಿತ್ತು. ಬಸ್ ಸಂಚರಿಸುತ್ತಿರುವಾಗಲೇ ವಾಂತಿ ಬರುತ್ತಿದೆ ಎಂದು ಬಸ್ನ ಬಾಗಿಲ ಬಳಿ ಹೋಗಿದ್ದಾಳೆ. ಬೆಟ್ಟದ ಶನೇಶ್ವರಸ್ವಾಮಿ ದೇವಸ್ಥಾನದ ತಿರುವಿನಲ್ಲಿ ಬಸ್ನಿಂದ ಕೆಳಗೆ ಬಿದ್ದ ಕುಳ್ಳಮಾದಿ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಕೊನೆಯುಸಿರೆಳೆದರು.
ಆನಂತರ ಮೃತದೇಹವನ್ನು ಅದೇ ವಾಹನದಲ್ಲಿ ಕೊಂಡೊಯ್ದು ಮಲೆ ಮಹದೇಶ್ವರ ಬೆಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರವಾನಿಸಿದ್ದಾರೆ. ಬಳಿಕ ಆಕೆಯ ಜೊತೆಯಲ್ಲಿದ್ದ ಸಂಬಂಧಿ ಕೆಂಪಮಾದಮ್ಮ ನೀಡಿದ ದೂರಿನನ್ವಯ ಮ.ಬೆಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತದೇಹವನ್ನು ಶವಪರೀಕ್ಷೆ ನಡೆಸಿ ರಾತ್ರಿ ತಡವಾಗಿ ನೀಡಲಾಗಿದೆ. ಕಾಂಡಚಿನ ಭಾಗದಲ್ಲಿ ಇರುವ ಹಳೇಯೂರು ಗ್ರಾಮಕ್ಕೆ ಕೊಂಡು ಹೋಗಲು, ಮೃತನ ಸಂಬಂಧಿಕರು 108ಗೆ ಕರೆ ಮಾಡಿ ಕೇಳಿದಾಗ ಸೇವೆ ವಾಹನ ಲಭ್ಯವಾಗಿಲ್ಲ. ಪ್ರಾಥಮಿಕ ಆರೋಗ್ಯ ತುರ್ತುವಾಹನ ಇದ್ದರೂ ಚಾಲಕನಿಲ್ಲದೆ ಉಪಯೋಗಕ್ಕೆ ಬಂದಿಲ್ಲ.
ಕೊನೆಗೆ ಸಂಬಂಧಿಕರು ಹಾಗೂ ಗ್ರಾಮಸ್ಥರು ಮೃತದೇಹವನ್ನು ಬಟ್ಟೆಯ ನೆನೆಯಲ್ಲಿ ಜೋಕಲಿ ಕಟ್ಟಿಕೊಂಡು ಹೆಗಲ ಮೇಲೆ ಹೋತ್ತು ರಾತ್ರಿ ಸುಮಾರು 8 ಕಿ.ಮೀ ಸಾಗಿ ಗ್ರಾಮ ತಲುಪಿದರು.
ಆರೋಗ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಂಟಾದ ಈ ಅವ್ಯವಸ್ಥೆಗೆ ಸಾರ್ವಜನಿಕವಾಗಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.