ಯತ್ನಾಳ್ ಸದಾ ಸುದ್ದಿಯಲ್ಲಿರಬೇಕು ಎಂದು ಕಾಂಗ್ರೆಸ್ ನಾಯಕರ ಬಗ್ಗೆ ಹೇಳಿಕೆಗಳನ್ನು ನೀಡುತ್ತಾರೆ | ಜನತಾ ನ್ಯೂಸ್
ಬೆಂಗಳೂರು : ಸದಾ ಸುದ್ದಿಯಲ್ಲಿರಬೇಕು ಎಂಬ ಕಾರಣಕ್ಕೆ ಹುಚ್ಚರು ಕಾಂಗ್ರೆಸ್ ನಾಯಕರ ಬಗ್ಗೆ ಮಾತನಾಡುತ್ತಿರುತ್ತಾರೆ. ಪ್ರಮುಖ ಸಮಸ್ಯೆಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ಕುತಂತ್ರ ಅನುಸರಿಸುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಕಿಡಿಕಾರಿದ್ದಾರೆ.
ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಒಬ್ಬ ಹುಚ್ಚ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
ಪಾಪಾ ಏನು ಮಾಡ್ತೀರಾ ಯತ್ನಾಳ್ ನ್ಯೂಸ್ ನಲ್ಲಿ ಇರಬೇಕು, ಆ ಹುಚ್ಚ ನ್ಯೂಸ್ ನಲ್ಲಿ ಇರಬೇಕು. ಅದಕ್ಕೆ ಏನೇನೋ ಮಾತಾಡುತ್ತಾನೆ. ಪ್ರಚಾರದಲ್ಲಿ ಇರಬೇಕಲ್ಲ ಅದಕ್ಕೆ ಏನೇನಾದ್ರೂ ಮಾತಾಡುತ್ತಾನೆ ಎಂದು ಕಿಡಿಕಾರಿದರು.
ಯತ್ನಾಳ್ ಸದಾ ಸುದ್ದಿಯಲ್ಲಿರಬೇಕು ಎಂದು ಹೇಳಿಕೆಗಳನ್ನು ನೀಡುತ್ತಾರೆ. ನಿರುದ್ಯೋಗ, ಬೆಲೆ ಏರಿಕೆಯಿಂದ ತೊಂದರೆ ಆಗುತ್ತಿದೆ. ಅದನ್ನು ಮರೆಸಲು, ಜನರ ದಾರಿ ತಪ್ಪಿಸಲು ಈ ರೀತಿ ಮಾತಾಡುತ್ತಾರೆ. ಜನರ ಮೈಂಡ್ ಡೈವರ್ಟ್ ಮಾಡಲು ಹೇಳ್ತಾರೆ ಎಂದು ಡಿಕೆ ಶಿವಕುಮಾರ್ ಆರೋಪಿಸಿದರು.
ವಿನಯ್ ಕುಲಕರ್ಣಿ ಅವರು ಪಕ್ಷದ ಹಿರಿಯ ನಾಯಕರು. ಮಂತ್ರಿಯಾಗಿ ನನ್ನೊಟ್ಟಿಗೆ ಕೆಲಸ ಮಾಡಿದ್ದಾರೆ. ದ್ವೇಷ ರಾಜಕೀಯದಿಂದ ಅವರಿಗೆ ನೋವಾಗಿದೆ. ನ್ಯಾಯಾಲಯದಲ್ಲಿ ಅವರ ಪ್ರಕರಣ ಯಾವ ಹಂತದಲ್ಲಿದೆ ಎಂದು ಗೊತ್ತಿದೆ ಎಂದರು.
ಅಫ್ಘಾನಿಸ್ತಾನ ವಿದ್ಯಾರ್ಥಿಗಳ ಪ್ರತಿನಿಧಿಗಳು ಬಂದು ನನ್ನ ಭೇಟಿ ಮಾಡಿದ್ದರು. ಅಲ್ಲಿನ ಘಟನೆಯಿಂದ ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ನಮ್ಮ ರಾಜ್ಯದಲ್ಲಿ ಅವರಿಗೆ ಧೈರ್ಯ ನೀಡಬೇಕು. ಅವರ ದೇಹ ಮಾತ್ರ ಇಲ್ಲಿದ್ದು, ಅವರ ಮನಸ್ಸು ಅಲ್ಲಿರುವ ಪೋಷಕರ ಮೇಲಿದೆ.
ಬೆಂಗಳೂರು ಶಿಕ್ಷಣ ಹಬ್ ಆಗಿದ್ದು, ಅನೇಕ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರಿಗೆ ಧೈರ್ಯ ತುಂಬಬೇಕು ಎಂದು ಹೇಳಿದರು.ಧರ್ಮ ಯಾವುದೇ ಆಗಿರಲಿ, ಮಾನವೀಯತೆ ದೃಷ್ಟಿಯಿಂದ ಅವರಿಗೆ ಧೈರ್ಯ ತುಂಬಬೇಕು.
ಅಫ್ಘಾನಿಸ್ತಾನದಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರುವುದು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿಚಾರ. ಈಗ ನಾನು ಆ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಲಿ ಎಂದು ತಿಳಿಸಿದರು.