ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿದ ಪಾಗಲ್ ಪ್ರೇಮಿ | ಜನತಾ ನ್ಯೂಸ್
ಬೆಂಗಳೂರು : ತನ್ನ ಪ್ರೀತಿಯನ್ನು ನಿರಾಕರಿಸಿದ ಯುವತಿಯನ್ನು ಪಾಗಲ್ ಪ್ರೇಮಿಯೊಬ್ಬ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿರುವ ಘಟನೆ ಬಾಗಲಗುಂಟೆಯ ಮಂಜುನಾಥ್ ನಗರದಲ್ಲಿ ನಡೆದಿದೆ.
ಉದಯ್ ಎಂಬಾತ, ಇಂದು ಯುವತಿ ಕಾಲೇಜಿಗೆ ಹೋಗುವಾಗ ಅಡ್ಡಗಟ್ಟಿದ್ದಾನೆ. ಈ ವೇಳೆ ತಾನು ತಂದಿದ್ದ ಚಾಕುವಿನಿಂದ ಯುವತಿ ಕುತ್ತಿಗೆ ಹಾಗೂ ತೊಡೆ ಭಾಗಕ್ಕೆ ಬಲವಾಗಿ ಇರಿದಿದ್ದಾನೆ. ಯುವತಿ ಕೊಲೆಗೆ ಯತ್ನಿಸಿ, ನಂತರ ತಾನೂ ಗೋಡೆಗೆ ತಲೆ ಚಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಉದಯ್ ಮತ್ತು ಯುವತಿ ರಾಜಾಜಿನಗರದ ಒಂದೇ ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಬಳಿಕ ಪ್ರತ್ಯೇಕ ಖಾಸಗಿ ಕಾಲೇಜಿನಲ್ಲಿ ಡಿಗ್ರಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕಳೆದ ಮೂರು ವರ್ಷದಿಂದ ಯುವತಿ ಜೊತೆ ಫ್ರೆಂಡ್ ಶಿಪ್ ಹೊಂದಿದ್ದ ಉದಯ್, ಇತ್ತೀಚೆಗೆ ಲವ್ ಪ್ರಪೋಸ್ ಮಾಡಿದ್ದ ಎನ್ನಲಾಗಿದೆ. ಆದರೆ ಯುವತಿ ಪಾಗಲ್ ಪ್ರೇಮಿಯ ಪ್ರೀತಿಯನ್ನು ನಿರಾಕರಿಸಿದ್ದಳು.
ಉದಯ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಈ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.