ಕೆಂಗೇರಿವರೆಗಿನ ನಮ್ಮ ಮೆಟ್ರೋ ರೈಲು ಸೇವೆಗೆ ಸಿಎಂ ಬೊಮ್ಮಾಯಿ ಹಸಿರು ನಿಶಾನೆ! | ಜನತಾ ನ್ಯೂಸ್
ಬೆಂಗಳೂರು : ಮೈಸೂರು ರಸ್ತೆ ಮೆಟ್ರೋ ನಿಲ್ದಾಣದಿಂದ ಕೆಂಗೇರಿವರೆಗಿನ 7.5 ಕಿಮೀ ಉದ್ದದ "ನಮ್ಮ ಮೆಟ್ರೋ" ರೈಲು ಸೇವೆಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹಸಿರು ನಿಶಾನೆ ತೋರಿದರು. ಬಳಿಕ ಮೊದಲ ರೈಲಿನಲ್ಲಿ ಕೆಂಗೇರಿ ಟರ್ಮಿನಲ್ಗೆ ಪ್ರಯಾಣ ಮಾಡಿದರು.
ನಂತರ ಮಾತನಾಡಿದ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ನಮ್ಮ ಮೆಟ್ರೋ ಮಾರ್ಗ ಉದ್ಘಾಟನೆ ಮಾಡಿದ್ದು ಖುಷಿ ಕೊಟ್ಟಿದೆ. ಬೆಂಗಳೂರು ನಗರವು ಇಡೀ ದೇಶದಲ್ಲಿ ಅರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಜೊತೆಗೆ ಐಟಿ-ಬಿಟಿ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ.
ಭಾರತದಲ್ಲಿ 600 ಮಿಲಿಯನ್ ಜನರು ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಹಲವು ಪ್ರಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸಂಸ್ಥೆಗಳು ಇಲ್ಲಿವೆ. ಬೆಂಗಳೂರಿನ ಎಲ್ಲಾ ಅಭಿವೃದ್ಧಿ ಕೆಲಸಗಳಿಗೆ ಕೇಂದ್ರ ಸರ್ಕಾರ ನೆರವು ನೀಡಲಿದೆ.
ಮೆಟ್ರೋ ರೈಲಿನ ಮೊದಲ ಹಂತದ ಕಾಮಗಾರಿ 2006ರಲ್ಲಿ ಆರಂಭವಾಗಿತ್ತು. ಬೆಂಗಳೂರಿನ ಮೆಟ್ರೋ ಇಂದು ಒಳ್ಳೆಯ ಹೆಸರನ್ನು ಪಡೆದಿದೆ. ಶೇ.98.8ರಷ್ಟು ಸಮಯಪಾಲನೆ ಹೊಂದಿದೆ ಎಂದರು. ಬೆಂಗಳೂರಿನಲ್ಲಿ ಮೆಟ್ರೋ ರೈಲಿಗೆ ಚಾಲನೆ ಕೊಟ್ಟಿದ್ದು ಖುಷಿ ತಂದಿದೆ. ದೇಶದ ಪ್ರಮುಖ ವಾಣಿಜ್ಯ ನಗರಗಳಲ್ಲಿ ಬೆಂಗಳೂರು ಒಂದಾಗಿದೆ. ಅಂತರಾಷ್ಟ್ರೀಯ ಮಟ್ಟದ ಶಿಕ್ಷಣ, ಸಂಶೋಧನೆ, ವೈದ್ಯಕೀಯ ಸಂಸ್ಥೆಗಳು ಇಲ್ಲಿವೆ.
ಸ್ವಾತಂತ್ರ್ಯ ಬಂದ ನಂತರ ಶೇ.17ರಷ್ಟು ಜನಸಂಖ್ಯೆ ನಗರಗಳಲ್ಲಿದ್ದವು. 2030 ವೇಳೆಗೆ ಭಾರತದ 600 ಮಿಲಿಯನ್ ಜನ ನಗರಗಳಲ್ಲಿ ವಾಸ ಮಾಡುತ್ತಿದ್ದಾರೆ. ಹತ್ತು ವರ್ಷಗಳಲ್ಲಿ ಯುಪಿಎ ಸರ್ಕಾರ ನಗರ ಯೋಜನೆಗಳಿಗೆ 1.57 ಸಾವಿರ ಕೋಟಿ ವೆಚ್ಚ ಮಾಡಿದೆ. ಎನ್ಡಿಎ ಸರ್ಕಾರ ಆರು ವರ್ಷದ ಅವಯಲ್ಲೇ 1.57 ಲಕ್ಷ ಕೋಟಿ ವೆಚ್ಚ ಮಾಡಿದೆ ಎಂದರು.
ಬೆಂಗಳೂರಿನಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿ ವರೆಗೂ ವಿಸ್ತರಣೆಗೊಂಡ 7.5 ಕಿ.ಮೀ. ದೂರದ ಸಂಚಾರವನ್ನು ಉದ್ಭಾಟಿಸಿದ ನಂತರ ಮಾತನಾಡಿದ ಅವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಯಲ್ಲಿ ಮೆಟ್ರೋ ಮಾರ್ಗವನ್ನು ರಾಮನಗರ, ಮಾಗಡಿ ರಸ್ತೆ ಮತ್ತು ರಾಜನಕುಂಟೆವರೆಗೂ ವಿಸ್ತರಣೆ ಮಾಡಲು ಯೋಜನೆ ರೂಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎರಡನೇ ಹಂತ ಪೂರ್ಣಗೊಂಡ ನಂತರ ರ 3ನೇ ಹಂತವನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ ಗಮನದಲ್ಲಿಟ್ಟುಕೊಂಡು ಬೆಂಗಳೂರು ನಗರವನ್ನು ಇನ್ನಷ್ಟು ಕಟ್ಟಬೇಕು. ಈ ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸದುದ್ದೇಶದಿಂದ ಕೆಲವೇ ದಿನಗಳಲ್ಲಿ ಅಮೃತ ನಗರೋತ್ಥಾನ ಯೋಜನೆ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಿಂದ ಬರುತ್ತಿರುವ ಜಿಡಿಪಿ ಪ್ರಮಾಣದಲ್ಲೂ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನು ಒಂದು ವರ್ಷದಲ್ಲಿ ಬೆಂಗಳೂರಿಗೆ ಸಂಬಂಸಿದ ಅಮೃತ ಯೋಜನೆಗಳನ್ನು ಜಾರಿ ಮಾಡಲಾಗುವುದು. ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಒಟ್ಟು 12 ರಸ್ತೆಗಳನ್ನು ಗುರುತು ಮಾಡಲಾಗಿದ್ದು, ಆಟೋಮೆಟಿಕ್ ಸಿಗ್ನಲಿಂಗ್ ವ್ಯವಸ್ಥೆ, ಮುಖ್ಯ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಸಂಚಾರ ಮುಕ್ತ ರಸ್ತೆಗಳನ್ನಾಗಿ ಮಾಡಲು ಈಗಾಗಲೇ ಕಾರ್ಯಾರಂಭಿಸಲಾಗಿದೆ ಎಂದು ತಿಳಿಸಿದರು.
2024ಕ್ಕೆ ಮೆಟ್ರೋ 2ನೇ ಹಂತವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಸಮರ್ಪಣೆ ಮಾಡಬೇಕೆಂದು ಅಕಾರಿಗಳಿಗೆ ಸೂಚಿಸಲಾಗಿದೆ. ಆದರೆ 2024ಕ್ಕೆ ಮುಗಿಸುವುದು ಕಷ್ಟ. 2025ಕ್ಕೆ ಮುಗಿಯಬಹುದೆಂದು ಅಕಾರಿಗಳು ಹೇಳಿದ್ದಾರೆ. ಕಷ್ಟಪಟ್ಟರೆ ಎಲ್ಲವೂ ಸಾಧ್ಯ ಎಂಬುದನ್ನು ಮನವರಿಕೆ ಮಾಡಿದ್ದೇನೆ. ಆದಷ್ಟು ಶೀಘ್ರ ಈ ಯೋಜನೆ ಪೂರ್ಣಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ ಎಂದರು.