ಯುವಕನಿಗೆ "ಮೂತ್ರ ನೆಕ್ಕಿಸಿದ್ದ" ಪಿಎಸ್ಐಗೆ 14 ದಿನಗಳ ನ್ಯಾಯಾಂಗ ಬಂಧನ | ಜನತಾ ನ್ಯೂಸ್
ಚಿಕ್ಕಮಗಳೂರು : ದಲಿತ ಯುವಕನೊಬ್ಬನಿಗೆ ಮೂತ್ರ ಕುಡಿಸಿದ ಪ್ರಕರಣ ಸಂಬಂಧ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಗೋಣಿಬೀಡು ಪೊಲೀಸ್ ಠಾಣೆ ಪಿಎಸ್ಐ ಅರ್ಜುನ್ ಅವರನ್ನು ಬೆಂಗಳೂರಿನಲ್ಲಿ ಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಸೆಪ್ಟೆಂಬರ್ 1ರಂದು ಬೆಂಗಳೂರಿನಲ್ಲಿ ಪಿ.ಎಸ್.ಐ. ಅರ್ಜುನ್ ನನ್ನ ಬಂಧಿಸಿದ ಸಿ.ಐ.ಡಿ. ಪೊಲೀಸರು ಇಂದು ಚಿಕ್ಕಮಗಳೂರು ಕೋರ್ಟ್ ಗೆ ಹಾಜರುಪಡಿಸಿದ್ದರು. ಈ ವೇಳೆ ನ್ಯಾಯಾಧೀಶೆ ಪುಷ್ಪಾಂಜಲಿ ಅವರು ಆರೋಪಿ ಅರ್ಜುನ್ ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.
ಗೋಣಿಬೀಡು ಠಾಣೆಯಲ್ಲಿ ಪಿ.ಎಸ್.ಐ. ಆಗಿದ್ದ ಅರ್ಜುನ್ ಮೇ.10ರಂದು ಮಹಿಳೆಗೆ ಕರೆ ಮಾಡಿದ ವಿಚಾರ ಸಂಬಂಧ ಪುನೀತ್ ಎಂಬ ಯುವಕನನ್ನ ವಿಚಾರಣೆಗೆ ಕರೆತಂದಿದ್ದರು. ಈ ವೇಳೆ ನನಗೆ ಬಾಯಾರಿಕೆ ಎಂದು ನೀರು ಕೇಳಿದಾಗ ಮತ್ತೊಬ್ಬ ಆರೋಪಿಯ ಮೂತ್ರ ಕುಡಿಸಿ, ನೆಲಕ್ಕೆ ಬಿದ್ದ ಮೂತ್ರವನ್ನ ನೆಕ್ಕಿಸಿದ್ದರು ಎಂದು ಪುನೀತ್ ಆರೋಪಿಸಿದ್ದರು.
ಘಟನೆ ಸಂಬಂಧ ಪಿಎಸ್ಐ ವಿರುದ್ಧ ಆರೋಪ ಮಾಡಿದ ಯುವಕ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದ. ಬಳಿಕ ಅರ್ಜುನ್ ವಿರುದ್ಧ ಗೋಣಿಬೀಡು ಠಾಣೆಯಲ್ಲಿ ಕೇಸ್ ದಾಖಲಾಗಿ, ಸರ್ಕಾರ ಅರ್ಜುನ್ ರನ್ನ ಅಮಾನತು ಮಾಡಿ ಪ್ರಕರಣವನ್ನ ಸಿಐಡಿಗೆ ವಹಿಸಿತ್ತು.
ಬಂಧನಕ್ಕೊಳಗಾಗುವ ಆತಂಕದಿಂದ ಪಿಎಸ್ಐ ಅರ್ಜುನ್ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದರು. ಆದರೆ, ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಸೆಪ್ಟೆಂಬರ್ 1ರ ಬುಧವಾರ ರಾತ್ರಿ ಸಿಐಡಿ ಪೊಲೀಸರು ಅರ್ಜುನ್ ರನ್ನ ಬೆಂಗಳೂರಿನಲ್ಲಿ ಬಂಧಿಸಿದ್ದರು.