ವಿಜಯಪುರ ಏರ್ಪೋರ್ಟ್ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ಗೋವಿಂದ ಕಾರಜೋಳ | ಜನತಾ ನ್ಯೂಸ್
ವಿಜಯಪುರ : ವಿಜಯಪುರ ಜಿಲ್ಲೆಯ ಬುರಣಾಪುರ ಬಳಿ ವಿಮಾನ ನಿಲ್ದಾಣ ಕಾಮಗಾರಿ ಸ್ಥಳಕ್ಕೆ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಭೇಟಿ ನೀಡಿ ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ಐತಿಹಾಸಿಕ ವಿಜಯಪುರ ವಿಮಾನ ನಿಲ್ದಾಣಕ್ಕೆ 320 ಏರ್ ಬಸ್ ಬರುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಸಿಎಂ ಕೂಡ ಈ ಮನವಿಗೆ ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಯೋಜನೆಯನ್ನೂ ಕೂಡ ರೂಪಿಸಲು ಸರಕಾರ ಬದ್ಧವಾಗಿದೆ ಎಂದು ಗೋವಿಂದ ಕಾರಜೋಳ ತಿಳಿಸಿದರು.
ವಿಜಯಪುರದಲ್ಲಿ ವಿಮಾನ ನಿಲ್ದಾಣವಾಗಬೇಕು ಎಂಬ ಬೇಡಿಕೆ ಇತ್ತು. 1976 ರಿಂದಲೇ ಈ ಕುರಿತು ಪ್ರಯತ್ನ ಮಾಡುತ್ತಿದೆ. ನಂತರ 2008 ರಿಂದ 2013ರ ಅವಧಿಯಲ್ಲಿ ನಮ್ಮದೇ ಸರಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ತಾವೇ ಉಸ್ತುವಾರಿ ಸಚಿವರಾಗಿ 727 ಎಕರೆ ಜಮೀನಿನಲ್ಲಿ ಈ ವಿಮಾನ ನಿಲ್ದಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಲಾಗಿತ್ತು ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ತಿಳಿಸಿದರು.
ಏರ್ ಬಸ್ ಬರುವಂತಹ ವ್ಯವಸ್ಥೆ ಕೂಡಾ ಮಾಡಲಾಗಿದೆ. ಈ ಕಾಮಗಾರಿಯ ವೆಚ್ಚವನ್ನು ರೂ. 323 ಕೋ. ಗೆ ಹೆಚ್ಚಿಸಲಾಗಿದೆ. ಈಗಾಗಲೇ ಮೊದಲನೇ ಹಂತದಲ್ಲಿ ರೂ. 95 ಕೋ. ವೆಚ್ಚದಲ್ಲಿ ವಿಮಾನದ ರನ್ ವೇ ಮತ್ತು ರಸ್ತೆಗಳ ಕಾಮಗಾರಿಗಳಿಗೆ ಖರ್ಚು ಮಾಡಲಾಗಿದೆ. ಶೇ. 80ರಷ್ಟು ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇನ್ನು ಎರಡನೇ ಹಂತದ ಕಾಮಗಾರಿಗೆ ರೂ. 125 ಕೋ. ರೂ. ಗೆ ಟೆಂಡರ್ ಕರೆಯಲಾಗುವುದು. ನಾವೇ ವಿಮಾನ ನಿಲ್ದಾಣ ಉದ್ಘಾಟನೆ ಮಾಡಬೇಕು ಎಂಬ ಯೋಚನೆ ಮಾಡಿರುವುದಾಗಿ ಸಚಿವ ಗೋವಿಂದ ಕಾರಜೋಳ ತಿಳಿಸಿದರು.