ರಾಜಕೀಯ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಲು ಹೊಸ ನಿಯಮ: ಬೊಮ್ಮಾಯಿ ಮಹತ್ವದ ನಿರ್ಧಾರ | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಡೆಯುತ್ತಿದ್ದು, ಇವುಗಳಿಗೆ ನಿರ್ಬಂಧ ಹೇರಲು ನಿಯಮ ಜಾರಿಗೆ ತರುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಕೋವಿಡ್ ನಿಯಮ ಉಲ್ಲಂಘಿಸಿ ರಾಜಕೀಯ ಕಾರ್ಯಕ್ರಮಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಇದಕ್ಕೆ ಕಡಿವಾಣ ಹಾಕಲು ಹೊಸ ನಿಯಮ ರೂಪಿಸುತ್ತೇವೆ ಎಂದು ಹೇಳಿದರು.
ಕರೊನಾ ನಡುವೆಯೂ ರಾಜಕೀಯ ಸಭೆ, ಸಮಾರಂಭ, ರ್ಯಾಲಿಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇದನ್ನು ಗಂಭೀರವಾಗಿ ಪರಿಗಣಿಸಿದ್ದು, ನಿರ್ಬಂಧ ಹೇರಲು ಕಠಿಣ ನಿಯಮಗಳನ್ನು ಜಾರಿ ಮಾಡಲಾಗುವುದು. ಕೋವಿಡ್ ಸೋಂಕು ಹರಡುವ ಭೀತಿ ದಟ್ಟವಾಗಿದ್ದರೂ ಲೆಕ್ಕಿಸದೆ ಸಭೆ-ಸಮಾರಂಭಗಳು ನಡೆದಿವೆ. ಇದಕ್ಕೆಲ್ಲ ಶೀಘ್ರವೇ ಬ್ರೇಕ್ ಹಾಕುತ್ತೇವೆ. ರಾಜಕೀಯ ಸಭೆ, ಸಮಾರಂಭಗಳಿಗೆ ಮಾರ್ಗಸೂಚಿ ಹೊರಡಿಸುತ್ತೇವೆ ಎಂದರು.
ರಾಜಕೀಯ ಸಭೆ, ಸಮಾರಂಭಗಳಿಗೆ ಇರದ ನಿರ್ಬಂಧ ಗಣೇಶ ಹಬ್ಬಕ್ಕೆ ಏಕೆ? ಗಣೇಶೋತ್ಸವ ಆಚರಿಸಿದ್ರೆ ಮಾತ್ರ ಕರೊನಾ ಹರಡುತ್ತಾ? ರಾಜ್ಯದಲ್ಲಿ ಪಾಲಿಕೆ ಚುನಾವಣೆ ನಡೆಯುತ್ತಿದ್ದು, ಸಾವಿರಾರು ಜನ ಮೆರವಣಿಗೆ ಮಾಡಿದ್ದಾರೆ. ಇದಕ್ಕಿಲ್ಲದ ನಿರ್ಬಂಧ ಗಣೇಶೋತ್ಸವದ ಮೇಲ್ಯಾಕೆ ಎಂಬ ಆಕ್ರೋಶ ರಾಜ್ಯ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ.