ನಮ್ಮಲ್ಲಿ ಮಸೀದಿಯೊಳಗೆ ಗುಂಡು, ಬಾಂಬ್ ಗಳಿಂದ ಕೊಲ್ಲಲಾಗುವುದಿಲ್ಲ, ಭಾರತದ ಮುಸ್ಲಿಮರನ್ನು ಬಿಟ್ಟುಬಿಡಿ - ತಾಲಿಬಾನ್ ಗೆ ಸಚಿವ ನಕ್ವಿ ಮನವಿ | ಜನತಾ ನ್ಯೂಸ್
ನವದೆಹಲಿ : ತಾಲಿಬಾನ್ ವಕ್ತಾರರು ತಮ್ಮ ಗುಂಪು ಕಾಶ್ಮೀರದ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ಹೊಂದಿದೆ, ಎಂದು ಹೇಳಿಕೊಂಡ ಕೆಲವು ಗಂಟೆಗಳ ಒಳಗೆ, ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು ಉಗ್ರರಿಗೆ, ಭಾರತದ ಮುಸ್ಲಿಮರನ್ನು "ಬಿಟ್ಟುಬಿಡಿ" ಎಂದು ಹೇಳಿದ್ದಾರೆ.
ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ಯಾವುದೇ ಉಗ್ರ ದೌರ್ಜನ್ಯಗಳ ಉದಾಹರಣೆಗಳಿಲ್ಲ, ಎಂದು ಸ್ಪಷ್ಟವಾಗಿ ಹೇಳಿದ್ದಾರೆ. "ಈ ದೇಶದ ಸರ್ಕಾರಗಳ ಧರ್ಮಗ್ರಂಥವು ಸಂವಿಧಾನವಾಗಿದೆ ಮತ್ತು ದೇಶವು ಅದನ್ನು ಅನುಸರಿಸುತ್ತದೆ" ಎಂದು ನಖ್ವಿ ಹೇಳಿದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವರು ಭಾರತದಲ್ಲಿ ಅನುಸರಿಸುವ ಏಕೈಕ ಧರ್ಮಗ್ರಂಥವು ಸಂವಿಧಾನದ್ದಾಗಿದೆ. ಮತ್ತು ಇಲ್ಲಿನ ಮಸೀದಿಗಳಲ್ಲಿ ನಮಾಜ್ ಮಾಡುತ್ತಿರುವವರನ್ನು ಗುಂಡುಗಳು ಮತ್ತು ಬಾಂಬ್ಗಳಿಂದ ಕೊಲ್ಲಲಾಗುವುದಿಲ್ಲ, ಅಥವಾ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯುವುದಿಲ್ಲ, ಎಂದು ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸಂದೇಶ ರವಾನಿಸಿದ್ದಾರೆ.
ಭಾರತ ಮತ್ತು ಅಫ್ಘಾನಿಸ್ತಾನದ ಆಡಳಿತದ ನಡುವೆ ಗಮನಾರ್ಹ ವ್ಯತ್ಯಾಸವಿದೆ ಮತ್ತು ಹೀಗಾಗಿ ಈ ದೇಶದಲ್ಲಿ ಮುಸ್ಲಿಮರ ಪರವಾಗಿ ಮಾತನಾಡುವುದಕ್ಕಿಂತ ತಾಲಿಬಾನ್ ಉತ್ತಮವಾಗಿ ತಮ್ಮ ಕಾರ್ಯನಿರ್ವಹಿಸಲಿ, ಎಂದು ನಖ್ವಿ ಸೂಚಿಸಿದರು.
"ನಾನು ಅವರಿಗೆ (ತಾಲಿಬಾನ್) ಕೈಮುಗಿದು ಮನವಿ ಮಾಡುತ್ತೇನೆ, ಭಾರತದ ಮುಸ್ಲಿಮರನ್ನು ಬಿಟ್ಟುಬಿಡಿ" ಎಂದು ಸಚಿವರು ಮನವಿ ಮಾಡಿದ್ದಾರೆ. "ಇಲ್ಲಿ ಮಸೀದಿಗಳಲ್ಲಿ ಪ್ರಾರ್ಥನೆ ಮಾಡುವ ಭಕ್ತರ ಮೇಲೆ ಗುಂಡುಗಳು ಮತ್ತು ಬಾಂಬುಗಳಿಂದ ದಾಳಿ ನಡೆಸುವುದಿಲ್ಲ. ಇಲ್ಲಿ ಹುಡುಗಿಯರು ಶಾಲೆಗೆ ಹೋಗುವುದನ್ನು ತಡೆಯುವುದಿಲ್ಲ, ಅವರ ತಲೆ ಮತ್ತು ಕಾಲುಗಳನ್ನು ಕತ್ತರಿಸುವುದಿಲ್ಲ", ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು, "ಕಾಶ್ಮೀರವು ನಮ್ಮ ನ್ಯಾಯವ್ಯಾಪ್ತಿಯ ಭಾಗವಲ್ಲ ಮತ್ತು ಹಸ್ತಕ್ಷೇಪವು ನಮ್ಮ ನೀತಿಗೆ ವಿರುದ್ಧವಾಗಿದೆ," ಎಂದು ಇನ್ನೊಬ್ಬ ತಾಲಿಬಾನ್ ಮುಖಂಡ ಅನಸ್ ಹಕ್ಕಾನಿ ಹೇಳಿದ್ದ ಹೇಳಿಕೆಗೆ ತದ್ವಿರುದ್ಧವಾಗಿ, ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್ ಈ ವಾರ ಬಿಬಿಸಿ ಉರ್ದುಗೆ ನೀಡಿದ ಸಂದರ್ಶನದಲ್ಲಿ, "ಮುಸ್ಲಿಮರಾಗಿ, ಕಾಶ್ಮೀರ, ಭಾರತ ಅಥವಾ ಬೇರೆ ಯಾವುದೇ ದೇಶದಲ್ಲಿ ಮುಸ್ಲಿಮರಿಗಾಗಿ ಧ್ವನಿ ಎತ್ತುವ ಹಕ್ಕು ನಮಗೂ ಇದೆ" ಎಂದು ಹೇಳಿದ್ದರು.