ವ್ಯಾಕ್ಸಿನ್ ಪಡೆದ ನಂತರ ಮಗನ ಸಾವು: ಪೋಷಕರ ಆರೋಪ | ಜನತಾ ನ್ಯೂಸ್
ಹಾಸನ : ವ್ಯಾಕ್ಸಿನ್ ಪಡೆದ ನಂತರ ಮಗ ಸಾವನ್ನಪ್ಪಿದ್ದಾನೆ ಎಂದು ಪೋಷಕರು ಆರೋಪಿಸಿರುವ ಘಟನೆ ಹಾಸನದ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಸಮೀಪದ ಬೋರನಕೊಪ್ಪಲು ತಾಂಡ್ಯದ ವಸಂತ್ ನಾಯಕ್(35) ಮೃತ ದುರ್ದೈವಿಯಾಗಿದ್ದಾರೆ. ಸೆ.4 ರಂದು ವಸಂತ್ ನಾಯಕ್ ಕೋವಿಡ್-19 ಲಸಿಕೆ ಹಾಕಿಸಿಕೊಂಡಿದ್ದು, ನಂತರ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಸಂತ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ
ಮಗನ ಸಾವಿಗೆ ಕೋವಿಡ್-19 ಲಸಿಕೆ ಕಾರಣ ಎಂದು ವಸಂತ್ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಮೃತರ ಪೋಷಕರು ಒತ್ತಾಯಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್, ಜಿಲ್ಲೆಯಲ್ಲಿ 12 ಲಕ್ಷಕ್ಕೂ ಹೆಚ್ಚು ಜನರಿಗೆ ಕೋವಿಡ್-19 ಲಸಿಕೆಯನ್ನು ಹಾಕಲಾಗಿದೆ. ಯಾರಿಗೂ ಸಹ ಹೆಚ್ಚಿನ ಅಡ್ಡ ಪರಿಣಾಮ ಉಂಟಾಗಿಲ್ಲ ಹಾಗೂ ಸಾವು ಸಂಭವಿಸಿಲ್ಲ ಎಂದಿದ್ದಾರೆ.