ನವೆಂಬರ್ ತಿಂಗಳಲ್ಲಿ ಜಾಗತಿಕ ಬಂಡವಾಳ ಸಮಾವೇಶ: ಮುರುಗೇಶ್ ನಿರಾಣಿ | ಜನತಾ ನ್ಯೂಸ್
ಬೆಂಗಳೂರು : ನವೆಂಬರ್ ತಿಂಗಳಲ್ಲಿ ಜಾಗತಿಕ ಉದ್ಯಮ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಇಂದು ಬೆಂಗಳೂರಿನ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಕೈಗಾರಿಕಾ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಬರುವ ದಿನಗಳಲ್ಲಿ ಮತ್ತಷ್ಟು ಗುರಿಸಾಧನೆ ಮಾಡುತ್ತೇವೆ ಎಂದರು.
ಪ್ರಸ್ತುತ ಹಣಕಾಸು ವರ್ಷದ ಮೊದಲನೇ ವರ್ಷದ ತ್ರೈಮಾಸಿಕದಲ್ಲಿ 62,085 ಕೋಟಿ ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯ ಮೊದಲ ಸ್ಥಾನದಲ್ಲಿದೆ. ಮೊದಲ ತ್ರೈಮಾಸಿಕದಲ್ಲಿ ಅತಿ ಹೆಚ್ಚು ವಿದೇಶಿ ನೇರ ಬಂಡವಾಳ ಪಡೆಯುವ ಮೂಲಕ ನಾವು ಮೊದಲ ಸ್ಥಾನದಲ್ಲಿ ಇದ್ದೇವೆ, ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು ಶೇ. 48ರಷ್ಟಿದೆ ಎಂದು ತಿಳಿಸಿದರು.
2019, 2020ದ ಅವಧಿಯಲ್ಲಿ 30,746 ಕೋಟಿ ರೂ ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯವು ಮೂರನೇ ಸ್ಥಾನದಲ್ಲಿತ್ತು, 2020-21ರ ಅವಧಿಯಲ್ಲಿ 55,884 ಕೋಟಿ ರೂ ವಿದೇಶಿ ನೇರ ಬಂಡವಾಳ ಆಕರ್ಷಿಸಿ ರಾಜ್ಯವು ಮೂರನೇ ಸ್ಥಾನ ಕಾಯ್ದುಕೊಂಡಿದೆ, ಎಂದು ಅವರು ವಿವರಿಸಿದರು.
ಅಕ್ಟೋಬರ್ನಲ್ಲಿ ನಡೆಯಲಿರುವ ದುಬೈ ಫೆಸ್ಟಿವಲ್ನಲ್ಲಿ ಸಹ ರಾಜ್ಯ ಕೈಗಾರಿಕಾ ಇಲಾಖೆ ಸ್ಟಾಲ್ ತೆಗೆಯುತ್ತಿದ್ದೇವೆ. ನಾನು ಮೂರು ದಿನ ದುಬೈ ಫೆಸ್ಟಿವಲ್ನಲ್ಲಿ ಭಾಗವಹಿಸುತ್ತೇನೆ. ಹಿಂದಿನ ಸಮಾವೇಶಕ್ಕಿಂತ ಹೆಚ್ಚು ಬಂಡವಾಳ ಆಕರ್ಷಿಸುತ್ತೇವೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಹೂಡಿಕೆದಾರರನ್ನು ಸೆಳೆಯಲು ವಿದೇಶಗಳಲ್ಲಿ ರೋಡ್ ಶೋ ಸೇರಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ಅದಾಲತ್ ನಡೆಸಿ ಉದ್ಯಮಿಗಳ ಅಹವಾಲು ಆಲಿಸಲಾಗುವುದು. ಬಳಕೆಯಾಗದ ಕೈಗಾರಿಕೆ ಭೂಮಿಯನ್ನು ವಾಪಸ್ ಪಡೆಯಲಾಗುವುದು. ಹಣ ಪಾವತಿಸಿದವರಿಗೆ ಕೈಗಾರಿಕೆ ಆರಂಭಿಸಲು ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.