ಹಿಂದೂ ತೀರ್ಥಯಾತ್ರೆ : ವೈಷ್ಣೋ ದೇವಿ ದೇಗುಲಕ್ಕೆ ರಾಹುಲ್ ಗಾಂಧಿ ಭೇಟಿ | ಜನತಾ ನ್ಯೂಸ್
ವೈಷ್ಣೋದೇವಿ : ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಇಂದು ಗುರುವಾರ ವೈಷ್ಣೋ ದೇವಿ ದೇಗುಲಕ್ಕೆ ತೆರಳಿದ್ದಾರೆ. ಈ ಮೂಲಕ ಹಿಂದೂ ತೀರ್ಥಯಾತ್ರೆಯಲ್ಲಿ ವಿಂಧ್ಯಾಚಲದಿಂದ ವೈಷ್ಣೋ ದೇವಿಯವರೆಗೆ 10 ವರ್ಷಗಳಲ್ಲಿ ಇದುವರೆಗೆ ಇದು ಅವರ 11 ನೇ ಯಾತ್ರೆಯಾಗಿದೆ.
ರಾಹುಲ್ ಗಾಂಧಿ, ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿದ್ದು, ಕಾತ್ರಾದಿಂದ ವೈಷ್ಣೋ ದೇವಿ ದೇಗುಲಕ್ಕೆ ಇಂದು ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಿದ್ದು ವಿಶೇಷವಾಗಿತ್ತು. ಕಾಂಗ್ರೆಸ್ ಸಂಸದರು ಯಾತ್ರಾರ್ಥಿಗಳೊಂದಿಗೆ ನಡೆದುಕೊಂಡು ಹೋಗಿದ್ದು, ದೇಗುಲಕ್ಕೆ ತೆರಳುವ ಮಾರ್ಗಗಳು ಭದ್ರತಾ ಸಿಬ್ಬಂದಿಯಿಂದ ಸುತ್ತುವರಿಯಲ್ಪಟ್ಟಿತ್ತು. ಅಲ್ಲದೆ, ಪಕ್ಷದ ಧ್ವಜಗಳನ್ನು ಹಿಡಿದಿರುವ ಕಾಂಗ್ರೆಸ್ ಕಾರ್ಯಕರ್ತರು ಹಾದಿಯಲ್ಲಿ ಸಾಲುಗಟ್ಟಿ ನಿಂತಿರುವುದು ಕಂಡುಬಂದಿದೆ.
ಸದಾ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟಿಕಾಪ್ರಹಾರ ನಡೆಸುವ ರಾಹುಲ್ ಗಾಂಧಿ ಇಂದು ದೇಗುಲದಲ್ಲಿ ಬೆನ್ನಟ್ಟಿದ ಸುದ್ದಿಗಾರರಿಗೆ, "ನಾನು ಮಾತೆಗೆ ಪ್ರಾರ್ಥನೆ ಸಲ್ಲಿಸಲು ಇಲ್ಲಿಗೆ ಬಂದಿದ್ದೇನೆ. ನಾನು ಇಲ್ಲಿ ಯಾವುದೇ ರಾಜಕೀಯ ಟೀಕೆಗಳನ್ನು ಮಾಡಲು ಬಯಸುವುದಿಲ್ಲ" ಎಂದು ತಿಳಿಸಿದ್ದಾರೆ.
ಸಂಸದರು ಯಾತ್ರಿಕರೊಂದಿಗೆ ಸಂವಹನ ನಡೆಸುತ್ತಿರುವ ವಿಡಿಯೋಗಳನ್ನು ಕಾಂಗ್ರೆಸ್ ಪೋಸ್ಟ್ ಮಾಡಿದೆ. ಕಾಂಗ್ರೆಸ್ ನ ಜಮ್ಮು ಮತ್ತು ಕಾಶ್ಮೀರ ಘಟಕದ ಅಧ್ಯಕ್ಷ ಗುಲಾಂ ಅಹ್ಮದ್ ಮೀರ್ ಅವರ ಪ್ರಕಾರ, ರಾಹುಲ್ ಗಾಂಧಿ ಅವರು ವೈಷ್ಣೋ ದೇವಿಯನ್ನು ಭೇಟಿ ಮಾಡಲು ಬಹಳ ವರ್ಷಗಳಿಂದ ಬಯಸಿದ್ದರು, ಎನ್ನಲಾಗಿದೆ.