ಆಸ್ಕರ್ ಫರ್ನಾಂಡಿಸ್ ನಿಧನ: ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕರಿಂದ ಶ್ರದ್ಧಾಂಜಲಿ! | ಜನತಾ ನ್ಯೂಸ್
ಬೆಂಗಳೂರು : ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡೀಸ್ ನಿಧನದ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ಸಂತಾಪ ಸಭೆಯಲ್ಲಿ ಅವರು ಮಾತನಾಡಿದರು.
ನಗರದ ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಶ್ರದ್ಧಾಂಜಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ರಾಜ್ಯಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ ಹಾಗೂ ಮತ್ತಿತರರು ಭಾಗವಹಿಸಿದ್ದರು. ನಾಯಕರೆಲ್ಲ, ಆಸ್ಕರ್ ಫರ್ನಾಂಡಿಸ್ ಅವರ ಭಾವಚಿತ್ರಕ್ಕೆ ಪುಷ್ಪ, ನುಡಿ ನಮನ ಸಲ್ಲಿಸಿದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಕಾಂಗ್ರೆಸ್ನ ಒಬ್ಬ ನಿಷ್ಠಾವಂತ ಕಾರ್ಯಕರ್ತರಂತಿದ್ದರು. ಹಾಗಾಗಿ, ಅವರು ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾದರಿಯಾಗಿದ್ದರು.ಸೋನಿಯಾ ಗಾಂಧಿ, ರಾಜೀವ್ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಆಪ್ತರಾಗಿದ್ದರು. ವಿಶ್ವಾಸಕ್ಕೆ ಅರ್ಹರಾದ ವ್ಯಕ್ತಿಯಾಗಿದ್ದ ಕಾರಣಕ್ಕೆ ದೀರ್ಘ ಕಾಲ ರಾಜಕಾರಣದಲ್ಲಿ ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ ಕೆಲಸ ಮಾಡಲು ಅವಕಾಶ ಸಿಕ್ಕಿತ್ತು ಎಂದರು.40 ವರ್ಷ ದೀರ್ಘಕಾಲ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕೇಂದ್ರ ಸರ್ಕಾರದ ಮಂತ್ರಿಯಾಗಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಯಾಗಿ, ಕೇಂದ್ರದ ಚುನಾವಣಾ ಸಮಿತಿಯ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಪಕ್ಷದಲ್ಲಿ ಯುವಕರನ್ನು ಗುರುತಿಸಿ, ನಾಯಕರಾಗಿ ಬೆಳೆಸುವ ಶಕ್ತಿ ಹಾಗೂ ಕಾಳಜಿ ಇದ್ದಂತವರು. ಅಧಿಕಾರದ ದರ್ಪವಿಲ್ಲದ ಸರಳ ಸಜ್ಜನಿಕೆಯ ನಾಯಕರಾಗಿದ್ದರು. ಕಾರ್ಯಕರ್ತರಿಂದ ಹಿಡಿದು ದೊಡ್ಡ ಮುಖಂಡರವರೆಗೆ ಪ್ರತಿಯೊಬ್ಬರನ್ನೂ ಪ್ರೀತಿ, ವಿಶ್ವಾಸದಿಂದ ಕಾಣುತ್ತಿದ್ದರು ಎಂದರು.
ಸಂತಾಪ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಕುಟುಂಬಕ್ಕೆ ರಾಜ್ಯದಲ್ಲಿ ದುಖಃದ ದಿನ. ಆಸ್ಕರ್ ಫರ್ನಾಂಡೀಸ್ ಉಡುಪಿಯ ಮುನ್ಸಿಪಲ್ ಸದಸ್ಯರಾಗಿ ರಾಜಕಾರಣ ಆರಂಭಿಸಿ ಲೋಕಸಭಾ ಸದಸ್ಯ, ಕೇಂದ್ರ ಸಚಿವರಾಗಿ, ರಾಜ್ಯಸಭಾ ಸದಸ್ಯರಾಗಿದ್ದವರು. ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸುತ್ತಿದ್ದರು. ಯಾವುದೇ ದುರಾಭ್ಯಾಸ ಇರಲಿಲ್ಲ. ಯಾವ ಸ್ಥಾನದಲ್ಲಿ ಇದ್ದರೂ ಕಾರ್ಯಕರ್ತರ ಜೊತೆಗಿದ್ದರು. ನೂರಾರು ಜನ ನಾಯಕರನ್ನು ಬೆಳೆಸಿದ್ದಾರೆ ಎಂದು ನೆನಪಿಸಿಕೊಂಡರು.
ರಾಜ್ಯಸಭಾ ಸದಸ್ಯ ಹಾಗೂ ಹಿರಿಯ ಕಾಂಗ್ರೆಸ್ ಮಖಂಡರಾದ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಆಸ್ಕರ್ ಫರ್ನಾಂಡೀಸ್ ನಿಧನ ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರು ಕೊಟ್ಟ ಕೊಡುಗೆ ಅಪಾರ. ಯಾವುದೇ ಆಸೆ ಆಕಾಂಕ್ಷೆ ಇಲ್ಲದೆ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದರು. ಪಕ್ಷ ಸಂಘಟನೆಯಲ್ಲಿ ಅವರ ಕೊಡುಗೆ ಅಪಾರ ಎಂದರು.
ಜಿ. ಪರಮೇಶ್ವರ್ ಮಾತನಾಡಿ, ಆಸ್ಕರ್ ಫರ್ನಾಂಡೀಸ್ ನಿಧನ ದುಖಃ ದಿನ ಮಾತ್ರವಲ್ಲ ಹಲವು ನೆನಪುಗಳನ್ನು ತರುತ್ತಿದೆ. ಆಸ್ಕರ್ ಅವರ ಅಗಲಿಕೆಯಿಂದ ಕಾಂಗ್ರೆಸ್ ಬಡವಾಗುತ್ತಿದೆ. ಇಂತಹ ಮತ್ತೊಬ್ಬ ನಾಯಕರನ್ನು ಸೃಷ್ಟಿಸಲು ಸಾಧ್ಯವಿಲ್ಲ. ಇವರು ತೋರಿಸಿಕೊಟ್ಟ ದಾರಿ ನಮಗೆಲ್ಲ ಮಾರ್ಗದರ್ಶನವಾಗಿದೆ. ಇವತ್ತಿನ ದಿನದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನಾವು ಏನು ಮಾಡುತ್ತಿದ್ದೇವೆ ಎಂಬುವುದನ್ನು ನಾವು ಮೆಲುಕು ಹಾಕಿಕೊಳ್ಳಬೇಕು ಎಂದರು.