ಅವಿವಾಹಿತ ಯುವತಿಯ ಅವಧಿಪೂರ್ವ ಪ್ರಸವ, ಡಿಎನ್ ಎ ಪರೀಕ್ಷೆಗೆ ಮುಂದಾದ ಪೊಲೀಸರು! | ಜನತಾ ನ್ಯೂಸ್
ಶಿವಮೊಗ್ಗ : ಅವಿವಾಹಿತ ಯುವತಿಯೋರ್ವಳು ಅವಧಿಪೂರ್ವ ಪ್ರಸವದ ವೇಳೆ ಸಾವನ್ನಪ್ಪಿದ ಘಟನೆ ಶಿವಮೊಗ್ಗ ಜಿಲ್ಲಾಸ್ಪತ್ರೆಯಲ್ಲಿ ನಡೆದಿದೆ. ಹೆರಿಗೆಯಾದ ಎರಡು ಗಂಟೆಯ ಒಳಗಾಗಿ ತಾಯಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿರುವ ಕರುಣಾಜಕನ ಘಟನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಂಭವಿಸಿದೆ.
ಶಿವಮೊಗ್ಗ ತಾಲೂಕು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಮೃತ ಯುವತಿ. ಈಕೆ ಆಯನೂರಿನಲ್ಲಿ ಓದುವಾಗ ಆಯನೂರು ಸಮೀಪದ ಗ್ರಾಮದ ಮಧುಸೂದನ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಮನೆಯಲ್ಲಿ ಕಡುಬಡತನ ಇದ್ದಿದ್ದರಿಂದಾಗಿ ಉದ್ಯೋಗ ಅರಸಿ ಮೈಸೂರಿಗೆ ತೆರಳಿದ್ದಳು.
ಅಲ್ಲಿ ಅಶ್ವಿನಿಗೆ ಬಸವರಾಜ್ ಎಂಬಾತನ ಪರಿಚಯವಾಗಿತ್ತು. ಈತನೊಂದಿಗೆ ಕಾಲಕ್ರಮೇಣ ಅಶ್ವಿನಿಗೆ ಪ್ರೇಮಾಂಕುರವಾಗಿತ್ತು. ಇದೇ ವೇಳೆಗೆ ಕರೊನಾ ಲಾಕ್ಡೌನ್ ಆಗಿದ್ದರಿಂದಾಗಿ ಅಶ್ವಿನಿ ಸ್ವಗ್ರಾಮಕ್ಕೆ ಬಂದಿದ್ದಳು. ಕುಂಸಿಗೆ ಬರುವಾಗ ತನ್ನೊಂದಿಗೆ ಬಸವರಾಜನನ್ನೂ ಕರೆದುಕೊಂಡು ಬಂದಿದ್ದಳು.
ಬಸವರಾಜ್ ಬಗ್ಗೆ ಮನೆಯವರು ವಿಚಾರಿಸಿದಾಗ ಆತ ನನ್ನ ಸ್ನೇಹಿತ. ಲಾಕ್ಡೌನ್ ಹಿನ್ನೆಲೆಯಲ್ಲಿ ನನ್ನೊಂದಿಗೆ ಬಂದಿದ್ದಾನೆ, ಕೆಲ ದಿನದಲ್ಲೇ ಮತ್ತೆ ಮೈಸೂರಿಗೆ ಹೋಗುತ್ತಾನೆ ಎಂದಿದ್ದಳು. ಆದರೆ ಮನೆಯವರ ವಿಚಾರಣೆ ಹೆಚ್ಚಾದಾಗ ಹದಿನೈದು ದಿನದಲ್ಲೇ ಪ್ರೇಯಸಿಯ ಮನೆಯಿಂದ ಯುವಕ ಬೆಂಗಳೂರಿಗೆ ತೆರಳಿದ್ದ.
ಬಸವರಾಜ್ ಮೈಸೂರಿಗೆ ತೆರಳಿದ ಕೆಲದಿನಗಳ ಬಳಿಕ ಅಶ್ವಿನಿಯ ಆರೋಗ್ಯದಲ್ಲಿ ಏರುಪೇರಾಗಲಾರಂಭಿಸಿತ್ತು. ಆಗ ಅಶ್ವಿನಿ ಆಸ್ಪತ್ರೆಗೆ ಹೋಗಿ ಬರಲಾರಂಭಿಸಿದ್ದಳು. ಇದೇ ವೇಳೆಗೆ ಅಶ್ವಿನಿ ಹೊಟ್ಟೆಯೂ ಊದಿಕೊಳ್ಳಲಾರಂಭಿಸಿತ್ತು. ಈ ಬಗ್ಗೆ ಪಾಲಕರು ವಿಚಾರಿಸಿದಾಗ ಗ್ಯಾಸ್ ಸ್ಟಿಕ್ ನಿಂದ ಹೊಟ್ಟೆ ಊದಿಕೊಂಡಿದೆ ಎಂದು ಪಾಲಕರಿಗೆ ಸುಳ್ಳು ಹೇಳಿದ್ದ ಯುವತಿ ವಿಚಾರ ಮುಚ್ಚಿಟ್ಟುಕೊಂಡಿದ್ದಳು.
ಸೆ.12ರಂದು ವಿಪರೀತ ಹೊಟ್ಟೆನೋವಿನಿಂದ ಬಳಲುತ್ತಿದ್ದ ಅಶ್ವಿನಿಯನ್ನು ಪಾಲಕರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ವೈದ್ಯರು ತಪಾಸಣೆ ಮಾಡಿದಾಗ ಆಕೆ ಗರ್ಭಿಣಿ ಎಂಬುದು ಗೊತ್ತಾಗಿದೆ.
ಇದೇ ವೇಳೆಗೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು ಅವಧಿಪೂರ್ವವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಅವಧಿ ಪೂರ್ವವಾಗಿ ಮಗು ಜನಿಸಿದ್ದರಿಂದಾಗಿ ಮಗು ಬದುಕುಳಿದಿಲ್ಲ. ಮಗು ಮೃತಪಟ್ಟ ಎರಡು ಗಂಟೆ ಒಳಗಾಗಿ ಯುವತಿ ಕೂಡಾ ಮೃತಪಟ್ಟಿದ್ದಾಳೆ.
ತಾಯಿ ಹಾಗೂ ಹಸುಗೂಸು ಇಬ್ಬರೂ ಮೃತಪಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ಕುಂಸಿ ಠಾಣೆ ಪೊಲೀಸರು ವಿಚಾರಣೆ ಆರಂಭಿಸಿದ್ದರು. ಈ ಪ್ರಕರಣ ಸಂಬಂಧ ಕಾನೂನು ತೊಡಕು ಉಂಟಾದಲ್ಲಿ ಡಿಎನ್ಎ ಟೆಸ್ಟ್ ಮಾಡಿಸಿ ಮಗುವಿನ ತಂದೆ ಯಾರು? ಎಂದು ಪತ್ತೆ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ. ಪೊಲೀಸರು ಇದೀಗ ಡಿಎನ್ಎ ಟೆಸ್ಟ್ ಮೂಲಕ ಮಗುವಿನ ತಂದೆ ಯಾರು ಎಂದು ಪತ್ತೆ ಹಚ್ಚಲು ಮುಂದಾಗಿದ್ದಾರೆ.