ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ಸುಳ್ಯ ನ್ಯಾಯಾಲಯದಿಂದ ವಾರಂಟ್ ಜಾರಿ! | ಜನತಾ ನ್ಯೂಸ್
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆ ವಿದ್ಯುತ್ ಸಮಸ್ಯೆ ಬಗ್ಗೆ ಹೇಳಲು ಕರೆ ಮಾಡಿದ್ದ ಬೆಳ್ಳಾರೆಯ ವ್ಯಕ್ತಿಯೊಬ್ಬರ ನಡುವೆ ಉಂಟಾಗಿದ್ದ ವಾಗ್ವಾದಕ್ಕೆ ಸಂಬಂಧಿಸಿ ಹಲವು ಬಾರಿ ಸಮನ್ಸ್ ಜಾರಿ ಮಾಡಿದ ಬಳಿಕವೂ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿಯಲು ಗೈರು ಹಾಜರಾದ ಡಿಕೆಶಿ ವಿರುದ್ಧ ಸುಳ್ಯ ನ್ಯಾಯಾಲಯವು ವಾರಂಟ್ ಜಾರಿ ಮಾಡಿದೆ.
ಡಿ.ಕೆ.ಶಿವಕುಮಾರ್ ಇಂಧನ ಸಚಿವರಾಗಿದ್ದ ವೇಳೆಯಲ್ಲಿ ವಿದ್ಯುತ್ ಸಮಸ್ಯೆ ಕುರಿತಾಗಿ ಬೆಳ್ಳಾರೆಯ ವರ್ತಕರ ಸಂಘದ ಅಧ್ಯಕ್ಷ ಸಾಯಿ ಗಿರಿಧರ್ ರೈ ಡಿ.ಕೆ.ಶಿವಕುಮಾರ್ ಅವರಿಗೆ ಫೋನ್ ಕರೆ ಮಾಡಿ ದೂರಿದ್ದರು. ಈ ವೇಳೆ ಡಿ.ಕೆ.ಶಿವಕುಮಾರ್ ಹಾಗೂ ಗಿರಿಧರ್ ನಡುವೆ ಫೋನ್ ನಲ್ಲೇ ವಾಗ್ವಾದ, ಮಾತಿನ ಚಕಮಕಿ ನಡೆದಿತ್ತು.
ಈ ವಿಚಾರವಾಗಿ ಡಿ.ಕೆ.ಶಿವಕುಮಾರ್, ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಹಿನ್ನೆಲೆಯಲ್ಲಿ ಗಿರಿಧರ್ ರೈ ಅವರನ್ನು ಪೊಲೀಸರು ಬಂಧಿಸಿದ್ದರು. ಈ ಪ್ರಕರಣ ಸಂಬಂಧ ಸಾಕ್ಷ್ಯ ಹೇಳಲು ಡಿ.ಕೆ.ಶಿವಕುಮಾರ್ ಕೋರ್ಟ್ ಗೆ ಬರಬೇಕಿತ್ತು. ಆದರೆ ಹಲವು ಬಾರಿ ನೋಟೀಸ್ ನೀಡಿದರೂ ಡಿಕೆಶಿ ಕೋರ್ಟ್ ಗೆ ಹಾಜರಾಗಿರಲಿಲ್ಲ.
ಇದೀಗ ಸುಳ್ಯ ನ್ಯಾಯಾಲಯ ಡಿ.ಕೆ.ಶಿವಕುಮಾರ್ ಅವರಿಗೆ ಸೆ. 29 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ವಾರಂಟ್ ಜಾರಿ ಮಾಡಿ ಸೂಚಿಸಿದೆ.