ಗುಂಡು ಹಾರಿಸಿಕೊಂಡು ನಿವೃತ್ತ ಸೇನಾ ಅಧಿಕಾರಿ ಪುತ್ರ ಆತ್ಮಹತ್ಯೆ, ಕಾರಣ ಬಹಿರಂಗ! | ಜನತಾ ನ್ಯೂಸ್
ಬೆಂಗಳೂರು : ಆರ್ಮಿ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿ, ನಿವೃತ್ತ ಹವಾಲ್ದಾರ್ ಪುತ್ರ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಮುಂಜಾನೆ ಸದಾಶಿವನಗರದ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ರಾಹುಲ್ ಭಂಡಾರಿ (17) ಆತ್ಮಹತ್ಯೆ ಮಾಡಿಕೊಂಡಿ ರುವ ದ್ವಿತೀಯ ಪಿಯುಸಿ ವಿದ್ಯಾರ್ಥಿ.
ಮೂಲತಃ ಉತ್ತರಖಂಡದವರಾದ ಭಗತ್ಸಿಂಗ್ ಅವರು ಸೇನೆಯಲ್ಲಿ ಹವಾಲ್ದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಪ್ರಸ್ತುತ ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸುಮಾರು 20 ವರ್ಷಗಳಿಂದ ಪತ್ನಿ, ಪುತ್ರಿ ಹಾಗೂ ಮಗ ರಾಹುಲ್ ಜೊತೆ ಆರ್.ಟಿ.ನಗರದ ಬೇಕರಿ ಬಳಿ ವಾಸವಾಗಿದ್ದಾರೆ.
ವಿದ್ಯಾರ್ಥಿಯ ಸಾವು ಪ್ರಕರಣ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರೆಸಿದ್ದು, ತಂದೆಯ ಪಿಸ್ತೂಲ್ನಿಂದಲೇ ವಿದ್ಯಾರ್ಥಿ ಗುಂಡು ಹಾರಿಸಿಕೊಂಡಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.
ವಿಪರ್ಯಾಸ ಎಂದರೆ 500 ಕೊಟ್ಟಿಲ್ಲ ಎಂಬ ಕಾರಣಕ್ಕಾಗಿ ತಂದೆಯ ಜೊತೆ ಮಗ ಜಗಳ ಮಾಡಿಕೊಂಡಿದ್ದನಂತೆ. ಇದೇ ಕಾರಣಕ್ಕಾಗಿ ಆತ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಆರ್.ಟಿ.ನಗರ ನಿವಾಸಿ ರಾಹುಲ್ ಭಂಡಾರಿ ನಿನ್ನೆ ತಂದೆ ಬಳಿ 500 ರೂಪಾಯಿ ಕೇಳಿದ್ದನಂತೆ. ಕೊಡಲು ನಿರಾಕರಿಸಿದ ತಂದೆ ಕಾರಣವಿಲ್ಲದೆ ಹಣ ನೀಡುವುದಿಲ್ಲ ಎಂದು ಗದರಿಸಿದ್ದರು. ಇದರಿಂದ ಬೇಸರಗೊಂಡ ರಾಹುಲ್ ತಂದೆ ಹೆಸರಿನಲ್ಲಿದ್ದ ಪಿಸ್ತೂಲ್ ತೆಗೆದುಕೊಂಡು ಇಂದು ಮುಂಜಾನೆ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ರಾಹುಲ್ ಭಂಡಾರಿ ಆರ್ಮಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ಪ್ರತಿಭಾವಂತ ವಿದ್ಯಾರ್ಥಿ ಆಗಿದ್ದ ರಾಹುಲ್ ಪ್ರತಿನಿತ್ಯ ಬೆಳಗ್ಗೆ 3 ಗಂಟೆಗೆ ಎದ್ದು ಓದುತ್ತಿದ್ದನು. ನಂತರ ವಾಕಿಂಗ್ಗೆ ಹೋಗುತ್ತಿದ್ದನಂತೆ. ರಾತ್ರಿ ಅಕ್ಕ ಹಾಗೂ ಫೋಷಕರೊಂದಿಗೆ ಊಟ ಮಾಡಿ ಮಲಗಿದ ರಾಹುಲ್ ಇಂದು ಮುಂಜಾನೆ 4.25ರ ಸುಮಾರಿಗೆ ಎದ್ದು ಮನೆಯಲ್ಲಿ ಯಾರಿಗೂ ಗೊತ್ತಾಗದಂತೆ ಹೊರಗೆ ಹೋಗಿದ್ದಾನೆ.
ಕೆಲ ಸಮಯದ ಬಳಿಕ ತಾಯಿ ಎದ್ದು ನೋಡಿದಾಗ ರಾಹುಲ್ ಕೊಠಡಿಯಲ್ಲಿ ಇರಲಿಲ್ಲ. ಆತನ ಮೊಬೈಲ್ಗೆ ಕರೆ ಮಾಡಿದ್ದಾರೆ. ಆದರೆ ಕರೆ ಸ್ವೀಕರಿಸಿಲ್ಲ. ಗಾಬರಿಯಾಗಿ ಹುಡುಕಾಟ ನಡೆಸಿದ್ದಾರೆ. ಈ ನಡುವೆ ಇಂಡಿಯನ್ ಏರ್ಫೆಫೋರ್ಸ್ ಹೆಡ್ಕ್ವಾಟ್ರರ್ಸ್ನ ಗೋಡೆ ಪಕ್ಕದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ರಾಹುಲ್ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಮಾರ್ಗದಲ್ಲಿ ಹೋಗುತ್ತಿದ್ದ ಸಾರ್ವಜನಿಕರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಕಂಡು ಪೊಲೀಸ್ ಕಂಟ್ರೋಲ್ ರೂಮ್ಗೆ ವಿಷಯ ತಿಳಿಸಿದ್ದಾರೆ. ಸ್ಥಳದಲ್ಲೇ ಪಿಸ್ತೂಲು ಪತ್ತೆಯಾಗಿದ್ದು, ಯುವಕನ ತಲೆಯ ಬಲ ಭಾಗದಿಂದ ಸಿಂಗಲ್ ಬುಲೆಟ್ ಹಾದುಹೋಗಿ ಎಡಭಾಗದಿಂದ ಹೊರಬಂದಿದೆ. ಸ್ಥಳಕ್ಕಾಗಮಿಸಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾಗ ರಾಹುಲ್ ಜೇಬಿನಿಂದ ಮೊಬೈಲ್ ರಿಂಗ್ ಆಗುತ್ತಿತ್ತು. ಪೊಲೀಸರು ಮೊಬೈಲ್ ತೆಗೆದು ಕರೆ ಸ್ವೀಕರಿಸಿದಾಗ ಫೋಷಕರು ಮಾತನಾಡುತ್ತಿರುವುದು ಗೊತ್ತಾಗಿ ಅವರಿಗೆ ವಿಷಯ ತಿಳಿಸಿದ್ದಾರೆ.