ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು - ಸಿಎಂ ಬೊಮ್ಮಾಯಿ | ಜನತಾ ನ್ಯೂಸ್
ಬೆಂಗಳೂರು : ದೆಹಲಿ ಗಡಿ ಭಾಗಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗಳಿಗೆ ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರೇ ಪ್ರಾಯೋಜಕರು, ಎಂದು ವಿಧಾನಸೌಧದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇರ ಆರೋಪ ಮಾಡಿದ್ದಾರೆ.
ಇದಕ್ಕೂ ಮೊದಲು, ರಾಜ್ಯ ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರದ ನಿರಂತರ ಇಂಧನ ಬೆಲೆ ಹೆಚ್ಚಳ ಹಾಗೂ ದಿನಬಳಕೆ ವಸ್ತುಗಳ ದರ ಏರಿಕೆ ಖಂಡಿಸಿ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ವಿಧಾನಸೌಧದವರೆಗೆ ಸೈಕಲ್ ಜಾಥಾ ಆಯೋಜಿಸಿತ್ತು. ಈ ಜಾಥಾದಲ್ಲಿ ವಿರೋದ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈಶ್ವರ ಖಂಡ್ರೆ ಹಾಗೂ ದಿನೇಶ್ ಗುಂಡುರಾವ್ ಇನ್ನಿತರರು ಭಾಗವಹಿಸಿದ್ದರು.
ಬಳಿಕ ಸುದ್ದಿಸಂಸ್ಥೆ ಎಏನ್ಐ ನೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಅವರು, ಕಾಂಗ್ರೆಸ್ ಅಥವಾ ದೇಶದಲ್ಲಿರುವ ವಿದೇಶಿ ಏಜೆಂಟರ ಪ್ರಾಯೋಜಕತೆಯಿಂದ ದೆಹಲಿ ಗಡಿ ಭಾಗಗಳಲ್ಲಿ ಮತ್ತು ಇತರ ಸ್ಥಳಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ, ಎಂದು ನೇರ ಆರೋಪ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ದಿನೇಶ್ ಗುಂಡುರಾವ್ ಅವರು, ಈ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ಏಕೆಂದರೆ ಇದು ರೈತರ ಪ್ರತಿಭಟನೆಗೆ ಮಾಡಿದ ಅವಮಾನ. ಅವರ ಬಳಿ ಯಾವುದೇ ಪುರಾವೆ ಇದ್ದರೆ, ಅದನ್ನು(ಪ್ರತಿಭಟನೆ) ಪ್ರಾಯೋಜಿಸುತ್ತಿರುವವರನ್ನು ಅವರು ಬಂಧಿಸಬೇಕು. ನಾವು ಅವರಿಗೆ ಹಣದುಬ್ಬರ, ಎಲ್ಪಿಜಿ ಬೆಲೆ, ಇಂಧನ ಬೆಲೆಯ ಬಗ್ಗೆ ಕೇಳಿದೆವು. ಆದರೆ ಕೇಳದಿದ್ದಕ್ಕೆ ಅವರು ಉತ್ತರಿಸಿದರು. ಸಿಎಂಗೆ ಸುಳಿವಿಲ್ಲ, ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ.