ಗಣೇಶ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಅಗೌರವ : 9 ನೌಕರರು ಕೆಲಸದಿಂದ ವಜಾ, 2 ಅಮಾನತು, ಎಫ್ಐಆರ್ ದಾಖಲು | ಜನತಾ ನ್ಯೂಸ್
ಇಂದೋರ್ : ಗಣೇಶ ದೇವರ ಮೂರ್ತಿ ವಿಸರ್ಜನೆಯಲ್ಲಿ ಭಾರಿ ಪ್ರಮಾಣದ ಅಸಡ್ಡೆ, ಅಗೌರವ ತೋರಿದ ನಗರ ಪಾಲಿಕೆ ನೌಕರರಿಗೆ ತಕ್ಕ ಶಿಕ್ಷೆ ಎದುರಾಗಿದೆ. ಗಣೇಶ ದೇವರ ಮೂರ್ತಿ ವಿಸರ್ಜನೆಯ ಕಾರ್ಯಕ್ರಮದ ಹೊಣೆಹೊತ್ತ ಇಂದೋರ್ ನಗರ ಪಾಲಿಕೆ(ಐಎಂಸಿ) ನೌಕರರು ಕರ್ತವ್ಯಲೋಪ ಅಷ್ಟೇ ಅಲ್ಲದೇ, ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನೂ ಘಾಸಿ ಗೊಳಿಸಿದ್ದರು. ಸಧ್ಯಕ್ಕೆ, ಕೆಲಸ ಕಳೆದು ಕೊಂಡಿದ್ದು ಅಲ್ಲದೇ, ಅವರ ಮೇಲೆ ಪೋಲಿಸ್ ದೂರು ಸಲ್ಲಿಲಾಗಿದೆ.
ಗಣೇಶ ವಿಗ್ರಹಗಳನ್ನು ಡಂಪರ್ಗಳಿಂದ ಜಲಾಶಯಕ್ಕೆ ಎಸೆಯುವುದನ್ನು ನೋಡಿದರು ವಿಡಿಯೋವೊಂದು ವೈರಲ್ ಆದ ನಂತರ 9 ನೌಕರರ ಸೇವೆಯನ್ನು ಕೊನೆಗೊಳಿಸಲಾಯಿತು, 2 ಜನರನ್ನು ಅಮಾನತುಗೊಳಿಸಲಾಗಿದೆ, ಎಂದು ಇಂದೋರ್ ನಗರ ಪಾಲಿಕೆ(ಐಎಂಸಿ) ಆಯುಕ್ತರಾದ ಪ್ರತಿಭಾ ಪಾಲ್, ಮಾದ್ಯಮಗಳಿಗೆ ತಿಳಿಸಿದ್ದಾರೆ.
ವೈರಲ್ ವೀಡಿಯೋವನ್ನು ಗಮನಿಸಿದ ನಗರಾಡಳಿತ ಸಚಿವ ಭೂಪೇಂದ್ರ ಸಿಂಗ್ ಅವರು ಜನರ ಭಾವನೆಗಳನ್ನು ನೋಯಿಸುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಪಾಲ್ ಅವರಿಗೆ ಸೂಚಿಸಿದ್ದರು, ಎನ್ನಲಾಗಿದೆ.
ಐಎಂಸಿ ಎಲ್ಲಾ ವಲಯ ಕಚೇರಿಗಳಲ್ಲಿ ಮೂರ್ತಿ ಸಂಗ್ರಹ ಕೇಂದ್ರಗಳನ್ನು ಸ್ಥಾಪಿಸಿತ್ತು. ಜನರು ತಮ್ಮ ಮನೆಗಳಲ್ಲಿ ಸ್ಥಾಪಿಸಿದ ವಿಗ್ರಹಗಳನ್ನು ಐಎಂಸಿ ಉದ್ಯೋಗಿಗಳಿಗೆ ಸಂಗ್ರಹ ಕೇಂದ್ರಗಳಲ್ಲಿ ಹಸ್ತಾಂತರಿಸಿದ್ದರು. ಈ ರೀತಿ ಸಂಗ್ರಹಿಸಲಾದ ಮೂರ್ತಿಗಳನ್ನು ಗೌರವಯುತವಾಗಿ ಮುಳುಗಿಸಲು ಅವರಿಗೆ ನಿರ್ದೇಶಿಸಲಾಗಿತ್ತು,
ಆದರೆ ಅವರು ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಲಿಲ್ಲ. ಅವರು ಜನರ ಭಾವನೆಗಳನ್ನು ಮತ್ತು ನಂಬಿಕೆಯನ್ನು ಘಾಸಿಗೊಳಿಸಿದ್ದಾರೆ. ನಾವು ಅವರ ವಿರುದ್ಧ ಎಫ್ಐಆರ್ ದಾಖಲಿಸುತ್ತೇವೆ, ಎಂದು ಆಯುಕ್ತರು ತಿಳಿಸಿದ್ದಾರೆ.
ಹಿಂದೂ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದ ಮತ್ತು ಐಎಂಸಿ ಘನತೆಗೆ ಧಕ್ಕೆ ತಂದಿದ್ದಕ್ಕಾಗಿ ಪೊಲೀಸರಿಗೆ ದೂರು ನೀಡಲಾಗಿದೆ.