ಉರಿ ಬಳಿ 3 ಭಯೋತ್ಪಾದಕರ ನಿರ್ಮೂಲನೆ ಮಾಡಿ, ಶಸ್ತ್ರಾಸ್ತ್ರ ವಶಕ್ಕೆ ಪಡೆದ ಭಾರತೀಯ ಪಡೆ | ಜನತಾ ನ್ಯೂಸ್
ಉರಿ : ಭಾರತೀಯ ಭೂಸೇನೆ ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಇಂದು ಗುರುವಾರ ಕೇಂದ್ರಾಡಳಿತ ಪ್ರದೇಶ ಜಮ್ಮು ಕಾಶ್ಮೀರದ ಉರಿ ಬಳಿಯ ರಾಂಪುರ್ ಸೆಕ್ಟರ್ನಲ್ಲಿ 3 ಪಾಕಿಸ್ತಾನಿ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯಲ್ಲಿನ ನಿಯಂತ್ರಣ ರೇಖೆ(ಎಲ್ಒಸಿ) ಬಳಿ ಒಳನುಸುಳುಕೋರರ ಯತ್ನವನ್ನು ಭಾರತೀಯ ಭೂಸೇನೆಯ ಚಿನರ್ ಕಾರ್ಪ್ ತುಕಡಿ ಗುರುವಾರ ವಿಫಲಗೊಳಿಸಿದ್ದು, ಮೂವರು ಭಯೋತ್ಪಾದಕರನ್ನು ಹತ್ಯೆಗೈದಿದೆ ಮತ್ತು ಭಾರಿ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ, ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಯೋತ್ಪಾದಕರು ಇತ್ತೀಚೆಗೆ ಪಾಕ್ ಆಕ್ರಮಿತ ಕಾಶ್ಮೀರದಿಂದ ಭಾರತದ ಕಡೆಗೆ ನಿಯಂತ್ರಣ ರೇಖೆ ದಾಟಿದ್ದರು, ಎಂದು ಸೇನಾ ಅಧಿಕಾರಿ ತಿಳಿಸಿದ್ದಾರೆ.
ಭಾರತೀಯ ಸೇನೆಯು ಕಾರ್ಯಾಚರಣೆಯಲ್ಲಿ ಹತರಾದ ಭಯೋತ್ಪಾದಕರಿಂದ 5 ಎಕೆ47 ಗನ್ ಗಳನ್ನು, 8 ಪಿಸ್ತೂಲ್ ಗಳನ್ನು, 70 ಹ್ಯಾಂಡ್ ಗ್ರೆನೇಡ್ಗಳನ್ನು, 3 ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ಪಾಕಿಸ್ತಾನಿ ಹಣದ ನೋಟ್ ಗಳನ್ನು ವಶಪಡಿಸಿಕೊಂಡಿದೆ.