ಎರಡು ಕೋಟಿ ಹಣಕ್ಕಾಗಿ ಸಾಫ್ಟ್ವೇರ್ ಇಂಜಿನಿಯರ್ ಅಪಹರಣ, ಅಪಹರಣಕಾರರ ಬಂಧನ! | ಜನತಾ ನ್ಯೂಸ್
ಬೆಂಗಳೂರು : ಎರಡು ಕೋಟಿ ಹಣಕ್ಕಾಗಿ ಸಾಫ್ಟ್ವೇರ್ ಇಂಜಿನಿಯರ್ನನ್ನು ಅಪಹರಿಸಿದ್ದ ಅಪಹರಣಕಾರರನ್ನು ಬಂಧಿಸಿ, ಕಿಡ್ನ್ಯಾಪ್ ಆಗಿದ್ದ ವ್ಯಕ್ತಿಯನ್ನು ರಕ್ಷಿಸಲಾಗಿದೆ. ಕಿಡ್ನ್ಯಾಪ್ ಆಗಿದ್ದ ಟೆಕ್ಕಿ ವಿನೀತ್ ವರ್ಧನ್ ಎಂಬುವವರನ್ನು ರಕ್ಷಣೆ ಮಾಡಲಾಗಿದೆ. ಸಿನಿಮೀಯ ಶೈಲಿಯಲ್ಲಿ ಕೋರಮಂಗಲ ಪೊಲೀಸರು ಕಾರ್ಯಾಚರಣೆ ನಡೆಸಿ ವ್ಯಕ್ತಿಯನ್ನು ರಕ್ಷಿಸಿದ್ದಾರೆ.
ವಿನೀತ್ ವರ್ಧನ್ನ ಕಿಡ್ನ್ಯಾಪ್ ಆಗಿತ್ತು. ವೃತ್ತಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದ. ಇತ್ತೀಚೆಗೆ ತನ್ನದೇ ಸ್ವಂತ ಕಂಪನಿಯನ್ನು ಹುಟ್ಟು ಹಾಕಿದ್ದ. ಕೆಲಸದ ಸಂಬಂಧ ಪ್ರತಿಷ್ಠಿತ ಕಂಪನಿ ಜತೆ ಪರಸ್ಪರ ಒಡಂಬಡಿಕೆ ಮಾಡಿಕೊಂಡಿದ್ದ. ಸೆ. 25 ರಂದು ವಿನೀತ್ ವರ್ಧನ್ ಬ್ಯಾಂಕ್ ಖಾತೆಗೆ ಕೋಟ್ಯಂತರ ರೂಪಾಯಿ ಹಣ ಬಂದು ಬೀಳುವುದು ಬಾಕಿ ಇತ್ತು.
ಎಣ್ಣೆ ಮಾರ್ಟಿ ಮಾಡುವ ನೆಪದದಲ್ಲಿ ಕೋರಮಂಗಲದಲ್ಲಿರುವ ವಿನೀತ್ ವರ್ಧನ್ ಮನೆಗೆ ಸ್ನೇಹಿತ ಪ್ರಶಾಂತ್ ಮತ್ತು ಸಂತೋಷ್ ಆಗಮಿಸಿದ್ದರು. ಪಾರ್ಟಿ ಮಾಡುವ ನೆಪ ಇಟ್ಟುಕೊಂಡು ಕಾರಿನಲ್ಲಿ ಬಂದಿದ್ದ ಸ್ನೇಹಿತರಿಬ್ಬರು ವಿನೀತ್ ವರ್ಧನ್ ಮನೆಗೆ ಭೇಟಿ ನೀಡಿದ್ದರು. ಮೊದಲಿನಿಂದಲೂ ಸ್ನೇಹಿತರ ಜತೆ ಸೇರಿ ಪಾರ್ಟಿ ಮಾಡುತ್ತಿದ್ದ ವಿನೀತ್ ವರ್ಧನ್ಗೆ ಯಾವುದೇ ಅನುಮಾನ ಬಂದಿರಲಿಲ್ಲ.
ಸ್ನೇಹಿತರ ಜತೆ ಪಾರ್ಟಿಗೆ ಎಂದು ಹೋದ ವಿನೀತ್ ಎರಡು ದಿನವಾದರೂ ಮನೆಗೆ ಬಂದಿರಲಿಲ್ಲ. ಅನುಮಾನಗೊಂಡ ಮನೆಯವರು ಕೋರಮಂಗಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಎರಡು ದಿನಕ್ಕೆ ಒಂದೊಂದು ಕಾಲ್ ಮಾಡಿ ಹಣ ನೀಡುವಂತೆ ಹೇಳಿದ್ದರು. ದೂರು ದಾಖಲಾಗಿರುವ ವಿಚಾರ ಆರೋಪಿಗಳಿಗೆ ತಿಳಿಯುತ್ತಿದ್ದಂತೆ ವಿನೀತ್ನ ಕೊಲೆ ಮಾಡಿ, ನಾವು ಸಾಯುತ್ತೇವೆ ಅಂದಿದ್ದರು. ಎರಡು ದಿನದಲ್ಲಿ ಹಣ ಕೊಡಲಿಲ್ಲ ಅಂದರೆ ನಾವು ಸಾಯುತ್ತೀವಿ, ಅವನನ್ನು ಸಾಯಿಸುತ್ತೇವೆ ಅಂತ ಹೇಳಿದ್ದರು.
ಕಿಡ್ನ್ಯಾಪರ್ಸ್ 50 ಕಿಲೋಮೀಟರ್ ಕ್ರಮಿಸಿ ಫೋನ್ ಕರೆ ಮಾಡಿದ್ದರು. ಫೋನ್ ಕರೆ ಮಾಡಿದ ಬಳಿಕ ಸ್ವಿಚ್ ಆಫ್ ಮಾಡುತ್ತಿದ್ದರು. ಫಾಸ್ಟ್ಟ್ಯಾಗ್ ಮೂಲಕ ಕಿಡ್ನ್ಯಾಪರ್ಸ್ ಸುಳಿವು ಪತ್ತೆಯಾಗಿತ್ತು. ಟೆಕ್ಕಿ ವಿನೀತ್ನನ್ನು ಕಾರಿನಲ್ಲಿ ಕೂರಿಸಿಕೊಂಡು ಹೋಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಕೋರಮಂಗಲ ಪೊಲೀಸರು ಕಾರ್ಯಚರಣೆ ನಡೆಸಿ ಎಡ್ವಿನ್ ಪ್ರಶಾಂತ್, ಸಂತೋಷ್, ಅರಿವೇಗಲನ್ ಬಂಧಿಸಿದ್ದಾರೆ.