ಅತ್ಯುತ್ತಮ ಶಾಸಕ ಪ್ರಶಸ್ತಿ: ಮಾಜಿ ಸಿಎಂ ಬಿಎಸ್ವೈಗೆ ಪ್ರದಾನ | ಜನತಾ ನ್ಯೂಸ್
ಬೆಂಗಳೂರು : ಲೋಕಸಭೆ ಮಾದರಿಯಂತೆ ಕರ್ನಾಟಕ ವಿಧಾನಸಭೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದ್ದು, ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿಯವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಅತ್ಯುತ್ತಮ ಶಾಸಕರಾಗಿ ಆಯ್ಕೆ ಮಾಡಿದರು. ಲೋಕಸಭಾ ಸ್ಪೀಕರು ಬಿಎಸ್ವೈಗೆ ಪ್ರಶಸ್ತಿ ಪ್ರದಾನ ಮಾಡಿದರು.
ಪ್ರಶಸ್ತಿ ಬಗ್ಗೆ ಮಾತನಾಡಿದ ಸ್ಪೀಕರ್ ಕಾಗೇರಿ ಅವರು ಈ ವರ್ಷದಿಂದ ಅತ್ಯುತ್ತಮ ಶಾಸಕ ಪ್ರಶಸ್ತಿ ಕೊಡ್ತಿದ್ದೇವೆ. ಲೋಕಸಭೆಯ ಮಾದರಿಯಲ್ಲಿ ಅತ್ಯುತ್ತಮ ಮಾದರಿ ಶಾಸಕ ಪ್ರಶಸ್ತಿ ಕೊಡಿ ಎಂದು ಓಂ ಬಿರ್ಲಾ ಅವರು ಹೇಳಿದರು. ಅದರಂತೆ ಈ ವರ್ಷದಿಂದ ಪ್ರಶಸ್ತಿ ನೀಡುತ್ತಿದ್ದೇವೆ. ಇದು ಶಾಸಕರ ಜವಾಬ್ದಾರಿ ಹೆಚ್ಚಿಸುವ ಕೆಲಸವಾಗಿದೆ ಎಂದರು.
ಈ ಕುರಿತಂತೆ ಬಿಎಸ್ವೈ ಟ್ವೀಟ್ ಮಾಡಿದ್ದು, ಜನಪ್ರತಿನಿಧಿಯಾಗಿ, ಪ್ರಜಾಪ್ರಭುತ್ವದ ದೇಗುಲದಲ್ಲಿ ಜನರ ಆಶೋತ್ತರಗಳ ಈಡೇರಿಕೆಯ ದೊಡ್ಡ ಜವಾಬ್ದಾರಿಯ ಅರಿವಿನೊಂದಿಗೆ ಶಾಸಕಾಂಗದ ಕರ್ತವ್ಯಗಳನ್ನು ನಿರ್ವಹಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಿದ್ದೇನೆ.ರಾಜ್ಯದ ವಿಧಾನಮಂಡಲದ ಇತಿಹಾಸದಲ್ಲಿ ಪ್ರಥಮ ಬಾರಿಗೆ ನೀಡಲಾದ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಅತ್ಯಂತ ವಿನೀತ ಭಾವದಿಂದ ಸ್ವೀಕರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ವಿಧಾನಸಭೆ ಜಂಟಿ ಸದನದಲ್ಲಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪನವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ ಮಾಡಿದರು. ಈ ವೇಳೆ ಪರಷತ್ ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಬಸವರಾಜ ಎಸ್ ಬೊಮ್ಮಾಯಿ ಭಾಗಿಯಾಗಿದ್ದರು.