ಮೋದಿಯವರ ಕೃಷಿ ಮೇಲಿನ ಹಂಬಲವನ್ನು ಜನತೆ ಬೆಂಬಲಿಸಿದ್ದಾರೆ! | ಜನತಾ ನ್ಯೂಸ್
ಬೆಂಗಳೂರು : ಇಂದು ಕರೆ ನೀಡಿದ್ದ ಭಾರತ್ ಬಂದ್ ವಿಫಲವಾಗಿದೆ. ಪ್ರಧಾನಿ ನರೇಂದ್ರ ಮೋದಿ ಬೆಂಬಲಕ್ಕೆ ರೈತರಿದ್ದಾರೆ ಅನ್ನುವುದು ಗೊತ್ತಾಗಿದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಹೋರಾಟ ಮಾಡಿದ್ದರು. ಬಿಜೆಪಿ ರೈತರ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ರೂಪಿಸಲಾಗಿತ್ತು. ಮೋದಿಯವರ ಕೃಷಿ ಮೇಲಿನ ಹಂಬಲವನ್ನು ಜನತೆ ಬೆಂಬಲಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.
100 ಕ್ಕೂ ಹೆಚ್ಚಿನ ಸಂಘಟನೆಗಳು ಬಂದ್ಗೆ ಕರೆ ನೀಡಿದ್ದು ನನಗೂ ಆತಂಕ ಇತ್ತು, ಆದರೆ ಇದಕ್ಕೆ ಜನತೆ ಬೆಂಬಲ ನೀಡಿಲ್ಲ. ಹೀಗಾಗಿ ರಾಜಕೀಯ ಅರಾಜಕತೆ ಸೃಷ್ಟಿಸಿ ಲಾಭ ಪಡೆಯುವವರ ಉದ್ದೇಶ ವಿಫಲವಾಗಿದೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ವಿರುದ್ಧ ರವಿ ವಾಗ್ದಾಳಿ ನಡೆಸಿದರು.
ಕೊವಿಡ್ ಕಾರಣಕ್ಕೆ ಬೆಲೆ ಏರಿಕೆಯಾಗಿದೆ. ನಾವು ಅಡಿಕೆ ಬೆಳೆಯುತ್ತೇವೆ. ಯಾವ ಕಾಲಕ್ಕೆ ಸಿಗದ ಬೆಲೆ ಇವಾಗ ನಮಗೆ ಅಡಿಕೆಗೆ ಬೆಲೆ ಸಿಕ್ಕಿದೆ. ರೈತರಿಗೆ 6000 ಹಣವನ್ನು ಸಿದ್ದರಾಮಯ್ಯ ಹಾಕಿದ್ರಾ? ಅದನ್ನು ಮೋದಿ ಹಾಕಿರೋದು. ಬೇರೆ ದೇಶಗಳಿಗೆ ಹೋಲಿಸಿದ್ರೆ ನಮ್ ದೇಶದ ಜಿಡಿಪಿ ಚೆನ್ನಾಗಿದೆ. ಸಿದ್ದರಾಮಯ್ಯ ಮತ್ತೆ ಸುಳ್ಳು ಒಂದೇ ನಾಣ್ಯದ ಎರಡು ಮುಖಗಳು ಎಂದು ಸಿ.ಟಿ. ರವಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಬೆಂಬಲ ಬೆಲೆಗೆ 40 ಸಾವಿರ ಕೋಟಿ ಇಟ್ಟಿದ್ರು, ಆದರೆ ನಾವು 1 ಲಕ್ಷ 20 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದೇವೆ. ಆದರೆ, ಮಸಾಲ ದೋಸೆ ಬೆಲೆ ಹೆಚ್ಚಿದೆ ಎಂದು ಹೇಳುವ ಸಿದ್ದರಾಮಯ್ಯನವರಿಗೆ ಬೆಂಬಲ ಬೆಲೆ ಹೆಚ್ಚು ಮಾಡಿರುವ ಬಗ್ಗೆ ಜಾಣಮರೆವು. ಕೇವಲ ಬಿಜೆಪಿ ರೈತ ವಿರೋಧಿ ಎಂದು ಬಿಂಬಿಸುವುದೇ ಅವರ ಉದ್ದೇಶ ಎಂದು ಕಿಡಿಕಾರಿದರು.
ಸುಧಾರಣೆಯ ಲಾಭ ರೈತನಿಗೆ ಸಿಗಬಾರದ? ಕೃಷಿಕ ತನ್ನ ಆದಾಯ ಎರಡು ಪಟ್ಟು ಮಾಡಿಕೊಳ್ಳುವುದು ತಪ್ಪಾ? ನಮ್ಮ ಸರ್ಕಾರ ಕೃಷಿಕರ ಆದಾಯ ಎರಡು ಪಟ್ಟು ಮಾಡುವುದು, ಕೃಷಿಗೆ ಬಂಡವಾಳ ಹೂಡುವುದು, ಕೃಷಿಕ ಊರು ಬಿಟ್ಟು ಹೋಗುವುದನ್ನು ತಪ್ಪಿಸುವುದು ಮುಂತಾದ ಗುರಿ ಹೊಂದಿದೆ.
ಆದರೆ, ಕೃಷಿಕರನ್ನು ಅಭಿವೃದ್ಧಿ ಪಡಿಸುವುದೇ ತಪ್ಪು ಎಂದು ಬಿಂಬಿಸಲು ಹೊರಟಿದ್ದಾರೆ. ಹೆಗ್ಗಣದ ರೀತಿಯಲ್ಲಿ ಕೊಬ್ಬಿದ ದಲ್ಲಾಳಿಗಳಿಗೆ ಇದರಿಂದ ತೊಂದರೆ ಆಗುತ್ತೆ. ರೈತ ಎಲ್ಲಿ ಬೇಕಾದರೂ ತನ್ನ ಬೆಳೆ ಮಾರಾಟ ಮಾಡಬಹುದು. ಇದರಿಂದ ದಲ್ಲಾಳಿಗಳಿಗೆ ತೊಂದರೆ ಆಗುತ್ತೆ. ಕಾಂಗ್ರೆಸ್ನವರು ದಲ್ಲಾಳಿಗಳ ಪರ ಹೋರಾಟ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಕೃಷಿ ಕಾರ್ಮಿಕರಿಗೂ ಪಿಂಚಣಿ ವ್ಯವಸ್ಥೆ ತರಬೇಕೆಂಬ ಚಿಂತನೆ ನರೇಂದ್ರ ಮೋದಿಯವರಿಗೆ ಇದೆ. ಅದಾನಿ, ಅಂಬಾನಿ ಪರ ಎಂದು ಹೇಳುತ್ತಾರೆ. ಇವರು ಈಗ ಬಂದವರೇನು? ಹಿಂದೇ ಇವರು ಇರಲಿಲ್ವಾ? ನರೇಂದ್ರ ಮೋದಿಯವರು ರೈತರ ಪರ. ರಸಗೊಬ್ಬರ ಬೆಲೆಗೆ ಸಬ್ಸಿಡಿ ನೀಡ್ತಿದ್ದೇವೆ. ಅದು ಇವರಿಗೆ ನೆನಪಿಲ್ವಾ? ಎಂದು ಪ್ರಶ್ನಿಸಿದ ಸಿ.ಟಿ.ರವಿ, ರೈತರ ಹೆಸರಿನಲ್ಲಿ ಈಗ ನಡೆಯುತ್ತಿರುವ ಹೋರಾಟ ರಾಜಕೀಯ ಷಡ್ಯಂತ್ರ, ಪಟ್ಟಭದ್ರ ಹಿತಾಸಕ್ತಿಗಳ ಷಡ್ಯಂತ್ರ ಎಂದು ಹೇಳಿದರು.
ಸಾವಯುವ ಕೃಷಿಯನ್ನೇ ಬ್ರಾಂಡ್ ಮಾಡಿ ಮಾರಾಟ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ರೈತರ ಅಭಿವೃದ್ಧಿ ಮಾಡುತ್ತಿರುವ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ದಲ್ಲಾಳಿ ಪರವಾಗಿ ಕೆಲವರು ಹೋರಾಟ ಮಾಡುತ್ತಿದ್ದಾರೆ. ಕಾಂಗ್ರೆಸ್ ಇವತ್ತು ದಲ್ಲಾಳಿಗಳ ಪರ ಹೋರಾಟ ಮಾಡುತ್ತಿದ್ದಾರೆ. ರೈತರ ಹೆಸರಲ್ಲಿ ದಲ್ಲಾಳಿಗಳ ಪರ ಮಾಡುತ್ತಿರುವ ರಾಕ್ಷಸರು ಈ ಹೋರಾಟಗಾರರು ಎಂದು ಸಿ.ಟಿ. ರವಿ ಆಕ್ರೋಶ ಹೊರಹಾಕಿದ್ದಾರೆ.