ಚುನಾವಣೆಗೆ 18 ತಿಂಗಳು ಬಾಕಿ, ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ! | ಜನತಾ ನ್ಯೂಸ್
ಬೆಂಗಳೂರು : ಚುನಾವಣೆಗೆ 18 ತಿಂಗಳು ಬಾಕಿ ಇದೆ. ಅದನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷ ಸಂಘಟನೆಗೆ ಕ್ರಮ ವಹಿಸಲಾಗಿದೆ. ಕನ್ನಡಿಗರ ಸ್ವಂತ ಪಕ್ಷ ಜೆಡಿಎಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪಕ್ಷದ ನಾಯಕರಿಗಾಗಿ ನಾಲ್ಕು ದಿನಗಳ ಜನತಾ ಪರ್ವ 1.0 ಎಂಬ ವಿಶೇಷ ಕಾರ್ಯಾಗಾರವನ್ನು ಜಾತ್ಯಾತೀತ ಜನತಾದಳ ಪಕ್ಷ ಆರಂಭಿಸಿದೆ. ಮಾತನಾಡಿದ ಎಚ್ ಡಿ ಕುಮಾರಸ್ವಾಮಿ ಅವರು, ಪಕ್ಷ ಬಲವಾಗುವ ನಿಟ್ಟಿನಲ್ಲಿ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಪಕ್ಷದಿಂದ ಹೊರಗೆ ಕಾಲಿಟ್ಟಿರುವವರ ಬಗ್ಗೆ ತಲೆ ಕೆಡಿಸಿಕೊಳ್ಳುವ ಪ್ರಶ್ನೆ ಇಲ್ಲ. ಹೋಗಬೇಕು ಎಂದುಕೊಂಡವರು ಹೋಗಬಹುದು ಎಂದರು.
ಪಕ್ಷ ಬಿಡಬೇಕು ಅಂದುಕೊಂಡವರಿಗೆ ಅದೊಂದು ನೆಪ ಅಷ್ಟೇ. ನಾನು ಯಾರನ್ನೂ ಕಡೆಗಣಿಸಿಲ್ಲ. ಜನ ಸಾಮಾನ್ಯರ ಕಷ್ಟವನ್ನೇ ಕೇಳುವವನು ನಾನು. ನಮ್ಮ ಶಾಸಕರ ಕಷ್ಟ ಕೇಳಲ್ವಾ..? ಪಕ್ಷ ಬಿಡಬೇಕು ಅಂದುಕೊಂಡವರು ನೀಡುವ ಸಬೂಬು ಇದು ಅಷ್ಟೇ ಎಂದು ಅವರು ಹೇಳಿದರು.
ನಾವು ಮುಂದಿನ 17 ತಿಂಗಳುಗಳ ಕಾಲ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ವಿವಿಧ ಪಕ್ಷದ ಚಟುವಟಿಕೆಗಳಲ್ಲಿ ಎಡೆಬಿಡದೆ ತೊಡಗಿಕೊಳ್ಳುತ್ತೇವೆ. 2023 ರಲ್ಲಿ ಕರ್ನಾಟಕಕ್ಕೆ ಕನ್ನಡಿಗರಿಂದ ಸರ್ಕಾರವನ್ನು ಜೆಡಿ ಎಸ್ ಮೂಲಕ ತರುವಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ. ಇದು 123ಕ್ಕೂ ಹೆಚ್ಚು ಸ್ಥಾನ ಆಗಿರಬಹುದು,ಇದಕ್ಕಿಂತ ಕಡಿಮೆ ಅಲ್ಲ. ಈ ಗುರಿ ಮೇರೆಗೆ ನಾವು ನಮ್ಮ ಚಟುವಟಿಕೆಗಳನ್ನು ಆರಂಭಿಸಿದ್ದೇವೆ. 2023 ರಿಂದ ಕರ್ನಾಟಕದಲ್ಲಿ ಒಂದು ಹೊಸ ಯುಗವು ಕನ್ನಡಿಗರ ಸ್ವಂತ ಪಕ್ಷ ಅಧಿಕಾರಕ್ಕೆ ಬರುವ ಮೂಲಕ ಆರಂಭವಾಗುತ್ತದೆ ಎಂದು ಹೇಳಿದರು.
ಜಾತ್ಯತೀತ ಜನತಾದಳಕ್ಕೆ ಇರುವ ಅವಕಾಶಗಳನ್ನು ಉತ್ತಮವಾಗಿ ಬಳಕೆ ಮಾಡಿಕೊಳ್ಳಬೇಕಿದೆ. ಆ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುತ್ತಿದೆ. ರಾಷ್ಟ್ರೀಯ ಪಕ್ಷಗಳ ನಡವಳಿಕೆ ಬಗ್ಗೆಯೂ ಚರ್ಚೆ ಮಾಡಿದ್ದೇವೆ ಎಂದು ಅವರು ಮಾಹಿತಿ ನೀಡಿದರು. ಪಕ್ಷದ ಸಂಘಟನೆಗೆ ಹೊಸ ರೀತಿಯಾಗಿ ಸಜ್ಜಾಗುತ್ತಿದ್ದೇವೆ. ಆಧುನಿಕ ಟೆಕ್ನಾಲಜಿಯನ್ನು ಬಳಸಿಕೊಳ್ಳುತ್ತಿದೆ. ಮುಂದಿನ ಚುನಾವಣೆಗೆ ಸಕಲ ರೀತಿಯ ಸಿದ್ದತೆಗಳು ಆಗಿವೆ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಕಾರ್ಯಾಗಾರದಿಂದ ಗುರುತಿಸಲಾದ ಅಭ್ಯರ್ಥಿಗಳು ಮೊದಲ ಹಂತದಲ್ಲಿ ತಮ್ಮ ಕ್ಷೇತ್ರಗಳಲ್ಲಿ ಜನರಿಗೆ ಹೇಗೆ ಹತ್ತಿರವಾಗಬೇಕು ಎಂಬುದರ ಕುರಿತು ತರಬೇತಿ ನೀಡಲಾಗುವುದು. ಅವರಿಗೆ ಶಿಸ್ತುಬದ್ಧವಾಗಿ ನಾಯಕತ್ವ ಗುಣಗಳನ್ನು ನಿರ್ಮಿಸಲು ಎಲ್ಲ ರೀತಿಯ ತರಬೇತಿಯನ್ನು ನೀಡಲಾಗುವುದು. ಈ ಎಲ್ಲಾ ತರಬೇತಿಯ ಹೊರತಾಗಿಯೂ, ಗುರುತಿಸಲಾದ ಅಭ್ಯರ್ಥಿಯು ಪಕ್ಷದ ನಿರೀಕ್ಷೆಯಂತೆ ಕರ್ತವ್ಯಗಳನ್ನು ನಿರ್ವಹಿಸದಿದ್ದರೆ, ಅವರನ್ನು ಬದಲಾಯಿಸಲು ನಿಬಂಧನೆಗಳಿವೆ ಎಂದು ಅವರು ಹೇಳಿದರು.