ಕಿರಿ ಮಗಳನ್ನು ತಬ್ಬಿಕೊಂಡೇ ನದಿಗೆ ಹಾರಿದ ತಾಯಿ, ಮಹಿಳೆ ಪ್ರಾಣಾಪಾಯದಿಂದ ಪಾರು! | ಜನತಾ ನ್ಯೂಸ್
ಗದಗ : ಮೂರು ಮಕ್ಕಳ ಸಮೇತ ಸಾಯಲು ಬಂದ ತಾಯಿ, ಚಿಕ್ಕ ಮಗಳನ್ನು ತಬ್ಬಿಕೊಂಡೇ ನದಿಗೆ ಹಾರಿದ ಹೃದಯವಿದ್ರಾವಕ ಘಟನೆ ಬುಧವಾರ ರೋಣ ತಾಲೂಕಿನ ಹೊಳೆಆಲೂರ ಗ್ರಾಮದ ಬಳಿ ಮಲಪ್ರಭಾ ನದಿಯಲ್ಲಿ ಸಂಭವಿಸಿದೆ.
ಸಾವಿಗೆ ಹೆದರಿದ ಮತ್ತಿಬ್ಬರು ಮಕ್ಕಳು ಅಮ್ಮನ ಕೈಯಿಂದ ತಪ್ಪಿಸಿಕೊಂಡಿದ್ದಾರೆ. ಸಂಗಮೇಶ ಚಲ್ಲಿಕೇರಿ ಅವರ ಪತ್ನಿ ಉಮಾದೇವಿ ಮತ್ತು ಇವರ ಕಿರಿ ಮಗಳು ನದಿಗೆ ಹಾರಿದವರು. ಸಂಗಮೇಶ ಮತ್ತು ಉಮಾದೇವಿ ದಂಪತಿಗೆ ನಾಲ್ವರು ಮಕ್ಕಳು. ಈ ಪೈಕಿ ಓರ್ವ ಪುತ್ರ, ಮೂವರು ಪುತ್ರಿಯರು. 3 ತಿಂಗಳ ಹಿಂದೆ ಕರೊನಾ ಸೋಂಕಿಗೆ ಸಂಗಮೇಶ ಬಲಿಯಾಗಿದ್ದರು. ಸುಮಾರು 20 ಲಕ್ಷ ರೂ. ಸಾಲದ ಸುಳಿಯಲ್ಲಿ ಈ ಕುಟುಂಬ ಸಿಲುಕಿತ್ತು. ಕರೊನಾದಿಂದ ಮೃತಪಟ್ಟ ಬಳಿಕ ಕುಟುಂಬಕ್ಕೆ ಮತ್ತಷ್ಟು ಆರ್ಥಿಕ ಸಂಕಷ್ಟ ಎದುರಾಗಿತ್ತು ಎನ್ನಲಾಗಿದೆ.
ಮೂವರು ಮಕ್ಕಳನ್ನ ಆತ್ಮಹತ್ಯೆ ಮಾಡಿಕೊಳ್ಳುವಂತೆ ಆಲೂರು ಗ್ರಾಮದಲ್ಲಿರುವ ಮಲಪ್ರಭಾ ನದಿ ಬಳಿ ಕರೆದುಕೊಂಡು ಬಂದಿದ್ದಾರೆ. ಆಗ 12, 14 ವರ್ಷದ ಮಕ್ಕಳು ಅಮ್ಮನಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ಇದೀಗ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿ ಉಮಾದೇವಿ ಬದುಕಿದ್ದಾಳೆ ಅನ್ನೋ ಮಾಹಿತಿ ಲಭ್ಯವಾಗಿದೆ. ನದಿಗೆ ಬಿದ್ದಿರುವ ಮಗುವಿನ ರಕ್ಷಣೆಗಾಗಿ ಶೋಧಕಾರ್ಯ ನಡೆಯುತ್ತಿದೆ. ಮತ್ತೊಂದು ಕಡೆ ರಕ್ಷಣೆ ಮಾಡಿರುವ ಉಮಾದೇವಿಯನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.