ವಕೀಲನ ಅಪಹರಿಸಿ 10 ಲಕ್ಷಕ್ಕೆ ಬೇಡಿಕೆ, 9 ಮಂದಿ ಬಂಧನ! | ಜನತಾ ನ್ಯೂಸ್
ಬೆಂಗಳೂರು : ವಕೀಲನನ್ನು ಅಪಹರಿಸಿದ್ದ ಸ್ಯಾಂಡಲ್ವುಡ್ ಖಳನಟರು ಸೇರಿದಂತೆ 9 ಮಂದಿ ಅಪಹರಣಕಾರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಸಿನಿಮಾ ಸ್ಟೈಲ್ನಲ್ಲಿ ವಕೀಲರೊಬ್ಬರನ್ನು 10 ಲಕ್ಷಕ್ಕಾಗಿ ಅಪಹರಣ ಮಾಡಿದ್ದರಂತೆ ಸ್ಯಾಂಡಲ್ವುಡ್ನ ಕೆಲ ಸಹ ಕಲಾವಿದರು. ವಕೀಲ ಅಭಯ್ ರವೀಂದ್ರ ಕುಲಕರ್ಣಿ ಎಂಬುವರನ್ನು ಅಪಹರಿಸಿದ ಆರೋಪದ ಮೇರೆಗೆ ಪ್ರಮುಖ ಆರೋಪಿ ಸಿದ್ದೇಶ್, ಸಂಜಯ್, ಅರುಣ್, ಅಶೋಕ್, ರವಿ ಸೇರಿದಂತೆ 9 ಮಂದಿಯನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಉದ್ಯಮಿ ಜೊತೆ ಸೇರಿ ವಕೀಲರ ಮನೆಯವರಿಗೆ ಕರೆ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ವಕೀಲ ಅಭಯ್ ರವೀಂದ್ರ ಕುಲಕರ್ಣಿ ಅವರು ಕಿಡ್ನಾಪ್ ಆಗಿ 12 ಗಂಟೆ ಕಳೆಯುವಷ್ಟರಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಸಂಜಯ್ ಕನ್ನಡ ಭಜರಂಗಿ, ಕೆಜಿಎಫ್, ಭರ್ಜರಿ ಹಾಗೂ ತೆಲುಗು ಸಿನಿಮಾದಲ್ಲಿ ಸಹ ಕಲಾವಿದನಾಗಿ ನಟಿಸಿದ್ದಾನೆ. ಇನ್ನು ಸಿದ್ದೇಶ್ ಸಿನಿಮಾಗಳಿಗೆ ಫೈನಾನ್ಸ್ ಮಾಡುತ್ತಿದ್ದ ಕಾರಣದಿಂದ ಈ ಸಹ ಕಲಾವಿದರ ಜೊತೆ ಪರಿಚಯ ಬೆಳೆಸಿಕೊಂಡಿದ್ದರಂತೆ.
ಇವರಿಗೆ ಪರಿಚಿತನಾಗಿದ್ದ ಸಿದ್ದೇಶ್ ಹಣಕಾಸಿನ ವ್ಯವಹಾರ ಹೊಂದಿದ್ದ. ಖಾಸಗಿ ಕಂಪನಿಯೊಂದರಲ್ಲಿ ಕಾನೂನು ಸಮಾಲೋಚಕನಾಗಿದ್ದ ಅಭಯ್ಗೆ ಕಂಪನಿಯೊಂದರಲ್ಲಿ ಹೂಡಿಕೆ ವಿಚಾರವಾಗಿ ಸಿದ್ದೇಶ್ ಹಣ ನೀಡಿದ್ದ ಎನ್ನಲಾಗಿದೆ.
ವಕೀಲ ರವೀಂದ್ರ ಕುಲಕರ್ಣಿ ಅವರು ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಕಂಪನಿಯಲ್ಲಿ ಹಣ ಹೂಡಿಕೆ ಮಾಡಲು ಉದ್ಯಮಿ ಅಂದ್ರಹಳ್ಳಿಯ ಸಿದ್ದೇಶ್ ಅವರು ನಿರ್ಧರಿಸುತ್ತಾರೆ. ನಂತರ ಹಣ ಹೂಡಿಕೆ ಕುರಿತಾಗಿ ರವೀಂದ್ರ ಕುಲಕರ್ಣಿ ಮೂಲಕ ಮಾತುಕತೆ ನಡೆಸುತ್ತಾರೆ ಉದ್ಯಮಿ ಸಿದ್ದೇಶ್. ಆಗ ರವೀಂದ್ರ ಅವರು ಬೇಸಿಕ್ ಚಾರ್ಜಸ್ ಅಂತ ಸಿದ್ದೇಶ್ ಅವರ ಬಳಿಯಿಂದ 6-7ಲಕ್ಷ ಹಣ ಪಡೆದಿದ್ದರಂತೆ. ಕೊಟ್ಟ ಹಣವನ್ನು ಸಿದ್ಧೇಶ್ ಅವರು ವಾಪಸ್ ಕೇಳಿದ್ದಾರೆ. ಆದರೆ ರವೀಂದ್ರ ಅವರು ಮಾತ್ರ ಈ ಹಣವನ್ನು ಹಿಂತಿರುಗಿಸದೇ ಇದ್ದಾಗ, ಸಿದ್ದೇಶ್ ಅವರು ಈ ಕಿಡ್ನಾಪ್ಗೆ ಪ್ಲಾನ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ ಸೆ.20 ರಂದು ಮಾತುಕತೆಗೆ ಎಂದು ಕರೆಯಿಸಿ ನಾಗರಭಾವಿಯ ಹೋಟೆಲ್ ಬಳಿ ವಕೀಲನನ್ನು ಕಾರಿನಲ್ಲಿ ಅಪಹರಿಸಿದ್ದಾರೆ. ಬಳಿಕ ವಕೀಲನ ಸಹೋದರನಿಗೆ ಕರೆ ಮಾಡಿ 10 ಲಕ್ಷ ರೂ. ತರುವಂತೆ ಧಮಕಿ ಹಾಕಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.ವಾಟ್ಸ್ಆ್ಯಪ್ ನಂಬರ್ಗೆ ಲೊಕೇಷನ್ ಕಳುಹಿಸಿ ಹಣ ತರುವಂತೆ ಒತ್ತಾಯಿಸಿದ್ದಾರೆ.
ಆರೋಪಿಗಳು ಕರೆ ಮಾಡಿದ ಮಾಹಿತಿ ಆಧರಿಸಿ ಶೋಧ ನಡೆಸಿದ್ದಾಗ ಆಂಧ್ರಹಳ್ಳಿ ಬಳಿಯ ಕಚೇರಿಯಲ್ಲಿ ಅಪಹರಣಕಾರರು ಇರುವುದು ತಿಳಿದುಬಂದಿದೆ. ಈ ಘಟನೆ ಸಂಬಂಧ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.