ಸರ್ಕಾರಿ ನೌಕರಿ ಕೊಡಿಸಿವುದಾಗಿ 55 ಜನರಿಂದ 1.62 ಕೋಟಿ ವಸೂಲಿ, ಬಂಧನ! | ಜನತಾ ನ್ಯೂಸ್
ಬೆಂಗಳೂರು : ಗೃಹ ಇಲಾಖೆಯಲ್ಲಿ ಸಹಾಯಕರ ಹುದ್ದೆ ಕೊಡಿಸುವುದಾಗಿ 55 ಜನರಿಂದ 1.62 ಕೋಟಿ ರೂ. ವಸೂಲಿ ಮಾಡಿ ವಂಚಿಸಿರುವ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ವಿಧಾನಸೌಧ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ್ ಎಂಬುವರು ನೀಡಿದ ದೂರಿನನ್ವಯ ವಸಂತನಗರದಲ್ಲಿರುವ ರೂರಲ್ ಎಸ್ಪಿ ಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕಿ(SDA)ಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಲೇಖಾ ಎಂಬುವರನ್ನು ವಿಧಾನಸೌಧ ಪೊಲೀಸರು ಬಂಧಿಸಿದ್ದಾರೆ.
ಶ್ರೀಲೇಖಾ ಮತ್ತು ಸಂಪತ್ಕುಮಾರ್ ಬಂಧಿತ ಆರೋಪಿಗಳು. ಇನ್ನೊರ್ವ ಆರೋಪಿ ರಾಧ ಉಮೇಶ್ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಘಟನೆ:
2019ರ ಮಾರ್ಚ್ನಲ್ಲಿ ರಾಧ ಉಮೇಶ್, ಕೆಪಿಸಿಸಿ ಕಾರ್ಮಿಕ ವಿಭಾಗ ಉಪಾಧ್ಯಕ್ಷೆ ಎಂದು ಪರಿಚಯ ಮಾಡಿಕೊಂಡರು. ವಿಧಾನಸೌಧದಲ್ಲಿ ಹಿರಿಯ ಅಧಿಕಾರಿಗಳು ಪರಿಚಯವಿದ್ದು, ದಿನಗೂಲಿ ನೌಕರರ ಏಜೆನ್ಸಿ ಕೊಡಿಸುವುದಾಗಿ 15 ಲಕ್ಷ ರೂ. ಕೇಳಿದರು.
ಅದನ್ನು ನಂಬಿ 4 ಕಂತುಗಳಲ್ಲಿ 15 ಲಕ್ಷ ರೂ. ನೀಡಿದೆ. ಆನಂತರ ಶ್ರೀಲೇಖಾ, ಏಜೆನ್ಸಿ ಬೇಡ. ಗೃಹ ಇಲಾಖೆಯಲ್ಲಿ ಕಿರಿಯ, ಹಿರಿಯ ಮತ್ತು ಅಧೀಕ್ಷರ ಹುದ್ದೆಗೆ ನೇರ ನೇಮಕಾತಿ ನಡೆಯುತ್ತಿದೆ. ಅದರಲ್ಲಿ ಕೆಲಸ ಕೊಡಿಸುವುದಾಗಿ ಮಾತು ಬದಲಾಯಿಸಿದರು. ಶ್ರೇಲೇಖಾ ಮಾತು ನಂಬಿ 55 ಮಂದಿ ಉದ್ಯೋಗ ಆಕಾಂಕ್ಷಿಗಳು ಒಟ್ಟಿಗೆ ಸೇರಿ ಹಂತ ಹಂತವಾಗಿ ಮೂವರು ಆರೋಪಿಗಳಿಗೂ 1.61 ಕೋಟಿ ರೂ. ಕೊಟ್ಟಿದ್ದೆವೆ.
ಹಣ ಸ್ವೀಕರಿಸಿದ ಆರೋಪಿಗಳು ನೇಮಕಾತಿ ಆದೇಶ ಪತ್ರವನ್ನು ನೀಡಿದರು. ಸೆ.24ರಂದು ವಿಧಾನಸೌಧ ಆರ್ಥಿಕ ಇಲಾಖೆಗೆ ಹೋಗಿ ನೇಮಕಾತಿ ಆದೇಶ ಪ್ರಮಾಣ ಪತ್ರವನ್ನು ನೀಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಅಲ್ಲದೆ, ಇಂತಹ ಹುದ್ದೆಗಳಿಗೆ ನೇಮಕಾತಿಯೇ ನಡೆದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.
ಆರೋಪಿಗಳನ್ನು ಪ್ರಶ್ನಿಸಿದಾಗ ಸಬೂಬು ಹೇಳಿ ಮೋಸ ಮಾಡಿದ್ದಾರೆ. ಈ ಮೂವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಮಂಜುನಾಥ್ ಎಂಬಾತ ಮನವಿ ಮಾಡಿದ್ದರು.