ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಧ್ವನಿ : ಕಪಿಲ್ ಸಿಬಲ್ ಬೆಂಬಲಕ್ಕೆ ನಿಂತ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಶಶಿ ತರೂರ್ | ಜನತಾ ನ್ಯೂಸ್
ನವದೆಹಲಿ : ಕಪಿಲ್ ಸಿಬಲ್, ಆನಂದ್ ಶರ್ಮಾ ಬೆನ್ನಲ್ಲೇ ಈಗ ಕಾಂಗ್ರೆಸ್ ಹಿರಿಯ ಮತ್ತು ಜಿ-23 ನಾಯಕ ಗುಲಾಂ ನಬಿ ಆಜಾದ್ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯನ್ನು ಕರೆಯುವಂತೆ ನಾಯಕತ್ವವನ್ನು ಕೇಳಿಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಬಿಕ್ಕಟ್ಟು ಮತ್ತು ಭಿನ್ನಾಭಿಪ್ರಾಯಗಳು ಮುಂದುವರಿದಿದ್ದು, ಕಾಂಗ್ರೆಸ್ ನ ಹಿರಿಯ ನಾಯಕರು ಕಪಿಲ್ ಸಿಬಲ್ ಬೆಂಬಲಕ್ಕೆ ಬಂದರು ಮತ್ತು ಪಕ್ಷದ ಕಾರ್ಯವೈಖರಿ ಕುರಿತು ಪ್ರಶ್ನೆಗಳನ್ನು ಎತ್ತಿದ ನಂತರ ಸಿಬಲ್ ಅವರ ಮನೆಯ ಹೊರಗೆ ಪ್ರತಿಭಟನೆ ನಡೆಸಿದ ಕೆಲವು ಕಾಂಗ್ರೆಸ್ ಕಾರ್ಯಕರ್ತರ "ಸಂಘಟಿತ ಗೂಂಡಾಗಿರಿ" ಯನ್ನು ಬಲವಾಗಿ ಖಂಡಿಸಿದ್ದಾರೆ. ಪಕ್ಷದಿಂದ ಹೆಚ್ಚುತ್ತಿರುವ ಪಕ್ಷಾಂತರ ಮತ್ತು ಪಂಜಾಬ್ ಘಟಕದಲ್ಲಿನ ಗೊಂದಲಗಳ ನಡುವೆ ಹೈಕಮಾಂಡ್ ವಿರುದ್ಧ ಹಿರಿಯ ನಾಯಕರ ಧ್ವನಿ ಹೆಚ್ಚುತ್ತಿದೆ.
ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಶಶಿ ತರೂರ್ ಮತ್ತು ಇನ್ನೂ ಕೆಲವು ಜಿ-23 ಸದಸ್ಯರು, ಪಕ್ಷದ ಕಾರ್ಯಕರ್ತರ ಕ್ರಮವನ್ನು ಟೀಕಿಸಿದ್ದಾರೆ. ಶರ್ಮಾ ಅವರು, ಎಐಸಿಸಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು, ದಾಳಿಯಲ್ಲಿ ಪಾಲ್ಗೊಂಡವರ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಮಾಜಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಕೂಡ ಇದನ್ನು ಬಲವಾಗಿ ಟೀಕಿಸಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಬಲ್ ಅವರ ಮೇಲೆ "ದಾಳಿ" ಮಾಡಿದ್ದರು ಏಕೆಂದರೆ ಅವರು "ಪಕ್ಷದ ನಾಯಕತ್ವಕ್ಕೆ ರುಚಿಸದ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆಯ್ಕೆ ಮಾಡಿದರು", ಎಂದು ಪರೋಕ್ಷವಾಗಿ ಹೈಕಮಾಂಡ್ ನ್ನು ಹೊಣೆಯಾಗಿಸಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಬರೆದ ಪತ್ರದಲ್ಲಿ, ಆಜಾದ್ ಅವರು ಇತರ ಪಕ್ಷಗಳಿಗೆ ನಿಷ್ಠಾವಂತರು ತೊರೆದು ಹೋಗುತ್ತಿರುವುದು ಪ್ರಕ್ಷುಬ್ಧತೆಗೆ ಕಾರಣವಾಗಿದೆ ಎಂದು ವಾದಿಸಿದ್ದಾರೆ, ಎಂದು ಹೇಳಲಾಗಿದೆ. ಸಿಡಬ್ಲ್ಯೂಸಿ ಚರ್ಚೆಯು ಕಾರ್ಯಕರ್ತರಿಗೆ ಸ್ಪಷ್ಟ ಸಂದೇಶವನ್ನು ಕಳುಹಿಸುತ್ತದೆ ಮತ್ತು ಅವರಿಗೆ ಭರವಸೆ ನೀಡುತ್ತದೆ ಎಂದು ಅವರು ಹೇಳಿದರು.
ಸಿಡಬ್ಲ್ಯೂಸಿ ಸಭೆಯ ಬೇಡಿಕೆಯು ಗಾಂಧಿಯವರನ್ನು ಗುರಿಯಾಗಿಸಿಕೊಂಡು ನವೀಕರಿಸಿದ ಜಿ-23 ರಿಂದ ಶುರುವಾಗಿದೆ. ಮಾಜಿ ಕೇಂದ್ರ ಸಚಿವ ಕಪಿಲ್ ಸಿಬಲ್ ಪತ್ರಿಕಾಗೋಷ್ಠಿಯಲ್ಲಿ "ಅವರಿಗೆ"(ನಾಯಕತ್ವ) ಹತ್ತಿರವಿರುವ ನಾಯಕರು ಪಕ್ಷವನ್ನು ತೊರೆದಿದ್ದಾರೆ ಮತ್ತು "ನಾವು(ಜಿ-23), ಅವರಿಗೆ ಹತ್ತಿರವೆಂದು ಪರಿಗಣಿಸದವರು ಅವರೊಂದಿಗೆ ನಿಂತಿದ್ದೇವೆ. ತಾವು ಪಕ್ಷದ ನಿಷ್ಠಾವಂತರು, ಆದರೆ ಕುರುಡು ಬೆಂಬಲಿಗರು ಅಲ್ಲ, ಎಂದು ಸೂಚಿಸಿದ ಸಿಬಲ್, "ನಾವು ಜಿ-23, ಜಿ ಹುಜೂರ್ 23 ಅಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.