ಸರ್ಕಾರಿ ಅಧಿಕಾರಿಗಳು ಮಾಧ್ಯಮ ಹೇಳಿಕೆ ನೀಡುವಂತಿಲ್ಲ: ಸಚಿವ ಆರ್ ಅಶೋಕ್ ಎಚ್ಚರಿಕೆ | ಜನತಾ ನ್ಯೂಸ್
ಮಂಡ್ಯ : ರಾಜ್ಯ ಸರ್ಕಾರದಿಂದ ಅಧಿಕಾರಿಗಳ ಸ್ವಾತಂತ್ರ್ಯಕ್ಕೆ ಕತ್ತರಿ ಹಾಕಿದ್ದು, ಅಧಿಕಾರಿಗಳು ಇಲಾಖೆಗೆ ಸಂಬಂಧಿಸಿದ ಯಾವುದೇ ವಿಚಾರಗಳನ್ನೂ ಮಾಧ್ಯಮಗಳಿಗೆ ತಿಳಿಸುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಒಬ್ಬ ಅಧಿಕಾರಿ ಮೇಲೆ ಇನ್ನೊಬ್ಬ ಅಧಿಕಾರಿ ಆರೋಪ ಮಾಡಿ ಸುದ್ದಿಗೋಷ್ಠಿ ನಡೆಸುವಂತಿಲ್ಲ, ಇಲಾಖೆಗೆ ಸಂಬಂಧಿಸಿದ ವಿಚಾರಗಳನ್ನು ಅಧಿಕಾರಿಗಳು ಮಾಧ್ಯಮಗಳ ಮುಂದೆ ಬಾಯ್ಬಿಡುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ್ ತಾಕೀತು ಮಾಡಿದ್ದಾರೆ.
ಯಾವುದೇ ವಿಚಾರಗಳ ಬಗ್ಗೆ ಸುದ್ದಿಗೋಷ್ಠಿ ನಡೆಸುವಂತಿಲ್ಲ. ಸರ್ಕಾರಕ್ಕೆ ಮುಜುಗರವುಂಟಾಗುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು. ಇಲಾಖೆಗಳಿಗೆ ಸಂಬಂಧಿಸಿದಂತೆ ಸುದ್ದಿಗೋಷ್ಠಿ ನಡೆಸಲು, ಮಾಹಿತಿ ತಿಳಿಸಲು ಆಯಾ ಇಲಾಖೆ ಸಚಿವರುಗಳಿದ್ದಾರೆ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.
ಮೇಲಿನ ನಿಯಮಗಳಲ್ಲಿನ ಅವಕಾಶಗಳಿಗೆ ವ್ಯತಿರಿಕ್ತವಾಗಿ ಯಾವುದೇ ಅಧಿಕಾರಿ ಸರ್ಕಾರದ ಕಾರ್ಯನೀತಿಗೆ ವ್ಯತಿರಿಕ್ತವಾಗಿ ಅನಪೇಕ್ಷಿತ ವೇದಿಕೆಗಳಲ್ಲಿ ತಮ್ಮದೇ ಆದ ಅನಿಸಿಕೆಗಳನ್ನು ವ್ಯಕ್ತಪಡಿಸಿ ಸರ್ಕಾರದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುವ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಕೃತ್ಯಗಳಲ್ಲಿ ತೊಡಗುವುದು ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ನಿಯಮಾನುಸಾರ ಶಿಸ್ತು ಮುಗಿಸಲಾಗುವುದು ಎಂದು ರಾಜ್ಯ ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ.
ರಾಜ್ಯದಲ್ಲಿ ಕೇಳಿಬರುತ್ತಿರುವ ಮತಾಂತರ ವಿವಾದದ ಕುರಿತೂ ಪ್ರತಿಕ್ರಿಯಿಸಿದ ಅವರು, ಮತಾಂತರ ಎಂಬುದು ಹೀನ ಕೃತ್ಯ. ಹುಟ್ಟಿರುವ ಧರ್ಮದಲ್ಲಿ ಪೂಜೆ ಮಾಡುವುದು ಅವರ ಹಕ್ಕು. ವಿದೇಶದಿಂದ ಹಣ ತಂದು ಏಜೆಂಟ್ಗಳ ಮೂಲಕ ಹಸು, ಎಮ್ಮೆ ಕೊಡಿಸುತ್ತೇವೆಂದು ಆಮಿಷ ಒಡ್ಡುತ್ತಿದ್ದಾರೆ. ಆಸ್ಪತ್ರೆ ಖರ್ಚು ವೆಚ್ಚ ನೋಡಿಕೊಳ್ಳುತ್ತೇವೆಂದು ಆಮಿಷ ತೋರಿಸಲಾಗುತ್ತಿದೆ. ಲಕ್ಷಾಂತರ ಜನರನ್ನು ಮತಾಂತರ ಮಾಡಲು ಪ್ರಯತ್ನಿಸಲಾಗುತ್ತಿದೆ. ಅಂತಹ ಸಮಾಜಘಾತುಕ, ದೇಶದ್ರೋಹಿಗಳ ವಿರುದ್ಧ ನಿಶ್ಚಿತವಾಗಿ ಕ್ರಮ ಕೈಗೊಳ್ಳಲಾಗುವುದು. ಹಣದಾಸೆಗಾಗಿ ಮತಾಂತರ ಮಾಡುತ್ತಿರುವುದು ಗೊತ್ತಿದೆ. ಮತಾಂತರಕ್ಕೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.