ಕೋವಿಡ್ಗೆ ಪತಿ ಬಲಿ, ಮಕ್ಕಳನ್ನು ಉರುಳಿಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ! | ಜನತಾ ನ್ಯೂಸ್
ಬೆಂಗಳೂರು : ಕರೊನಾದಿಂದ ಪತಿ ಮೃತಪಟ್ಟ ನಂತರ ನೋವಿನಿಂದ ಹೊರಬರಲಾರದೆ ಪತ್ನಿಯು ತನ್ನ ಇಬ್ಬರು ಮಕ್ಕಳೊಂದಿಗೆ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದಗುಡ್ಡದಹಳ್ಳಿದ ಪ್ರಕೃತಿ ಬಡಾವಣೆಯಲ್ಲಿ ನಡೆದಿದೆ.
ನೆಲಮಂಗಲದ ಮಾದನಾಯಕನ ಹಳ್ಳಿ ಬಳಿಯ ಪ್ರಕೃತಿ ಬಡಾವಣೆ ವಸಂತಾ (40), ಯಶವಂತ್ (15) ಹಾಗೂ ನಿಶ್ಚಿತಾ (6) ಮೃತಪಟ್ಟವರು. ಒಂದು ರೂಮಿನಲ್ಲಿ ಮಗನನ್ನು ನೇಣಿಗೆ ಹಾಕಿ, ಇನ್ನೊಂದು ಕೊಠಡಿಯಲ್ಲಿ ಮಗಳ ಜತೆ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ಪಿಯಾಪಟ್ಟಣ ಮೂಲದ ಪತಿ ಪ್ರಸನ್ನ ಕುಮಾರ್, ಬಿಎಂಟಿಸಿಯ ಚಾಲಕ ಕಂ ನಿರ್ವಾಹಕನಾಗಿದ್ದರು. ತೋಟದಗುಡ್ಡದಹಳ್ಳಿದ ಪ್ರಕೃತಿ ಬಡಾವಣೆಯಲ್ಲಿ ಕಳೆದ 3 ವರ್ಷಗಳ ಹಿಂದೆ ಮನೆ ಖರೀದಿಸಿದ್ದರು. ಪ್ರಸನ್ನ ಕುಮಾರ ಅವರು 2020ರ ಆಗಸ್ಟ್ ತಿಂಗಳ 7 ರಂದು ಕರೊನಾಗೆ ಬಲಿಯಾದರು.
ಮೃತಳ ಸಹೋದರ ಫೋನ್ ಮಾಡಿದ್ದು, ಕರೆ ಸ್ವೀಕರಿಸದಿದ್ದಾಗ ಹಾಗೂ ಸುತ್ತಮುತ್ತಲ ಜನ ಅನುಮಾನಗೊಂಡು ನೋಡಿದ್ದಾರೆ. ಆಗ ಮನೆ ಒಳಗಿನಿಂದ ಬಾಗಿಲು ಲಾಕ್ ಮಾಡಿಕೊಂಡಿದ್ದು, ಮತ್ತೆ ಏಣಿ ಏರಿ ಕಿಟಕಿ ಮೂಲಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಗಂಡನ ಅಗಲಿಕೆಯ ಬೇಸರದಿಂದ ವಸಂತ, ಹಲವು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು. ಆಗ ಅವರಿಗೆ ಕುಟುಂಬಸ್ಥರು, ಸ್ಥಳೀಯರು ಬುದ್ದಿವಾದ ಹೇಳಿ ಕಳುಹಿಸಿದ್ದರಂತೆ.
ನನ್ನ ಗಂಡನನ್ನ ಕಳೆದುಕೊಂಡ ನೋವಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ, ನನ್ನವರು ಅಂತ ಯಾರೂ ಇಲ್ಲ, ನಾನು ಮತ್ತು ನನ್ನ ಮಕ್ಕಳು ಯಾರಿಗೂ ಭಾರವಾಗುವುದಿಲ್ಲ. ನಮ್ಮ ಸಾವಿಗೆ ನಮ್ಮ ಸ್ವಾಭಿಮಾನವೇ ಕಾರಣ ಈ ಮನೆ ಮಾರಾಟ ಮಾಡಿ ನಮ್ಮ ಸಾಲ ತೀರಿಸಿಬಿಡಿ, ಹಣ ಉಳಿದರೆ ಅನಾಥಾಶ್ರಮಕ್ಕೆ ನೀಡಿ ಎಂದು ಮೂರು ಪುಟಗಳ ಡೆತ್ ನೋಟ್ ಬರೆದಿಟ್ಟು ಇಬ್ಬರು ಮಕ್ಕಳೊಂದಿಗೆ ತಾನೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.