ಬೀಗ ಹಾಕಿದ ಮನೆಕಳವು ಮಾಡುತ್ತಿದ್ದ ದಂಪತಿ ಅರೆಸ್ಟ್! | ಜನತಾ ನ್ಯೂಸ್
ಬೆಂಗಳೂರು : ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಂಡು ಮನೆಗಳ್ಳತನ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಆರ್.ಟಿ. ನಗರ ಪೊಲೀಸರು ಬಂಧಿಸಿದ್ದಾರೆ.
ಬಾಬು ಹಾಗೂ ಜಯಂತಿ ಬಂಧಿತ ಆರೋಪಿಗಳು. ಬಂಧಿತರಿಂದ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿಕೊಳ್ಳಲಾಗಿದೆ.
ಮನೆ ಬಾಡಿಗೆ ಕೇಳುವ ಸೋಗಿನಲ್ಲಿ ದಂಪತಿ ನಗರದ ಬೀದಿ ಬೀದಿಗೆ ಅಲೆಯುತ್ತಿದ್ದರು. ಈ ವೇಳೆ, ಬೀಗ ಹಾಕಿದ ಮನೆಗಳನ್ನೇ ಗುರಿಯಾಗಿಸಿಕೊಳ್ಳುತ್ತಿದ್ದರು. ಮನೆ ಮುಂಭಾಗದ ಕಿಟಕಿ ಸೇರಿದಂತೆ ಬೀಗದ ಕೀ ಇಡುವ ಸ್ಥಳಗಳನ್ನು ನೋಡಿಕೊಂಡು ಬರುತ್ತಿದ್ದರು. ಬಳಿಕ ವ್ಯವಸ್ಥಿತ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದರು. ಮನೆಯೊಳಗೆ ಪತ್ನಿ ಕಳ್ಳತನ ಮಾಡಿದರೆ ಪತಿ ಮನೆ ಮುಂಭಾಗದ ನಿಂತು ಯಾರಾದರೂ ಬಂದರೆ ಸೂಚನೆ ನೀಡುತ್ತಿದ್ದ. ಹೀಗೆ ಪಕ್ಕಾ ಪ್ಲ್ಯಾನ್ ಮಾಡಿ ಕಳ್ಳತನ ಮಾಡುತ್ತಿದ್ದರು.
ಆರ್ಟಿನಗರದ ಮಂಜುನಾಥ್ ಲೇಔಟ್ನಲ್ಲಿರುವ ಸತ್ಯನಾರಾಯಣ ಅಪಾರ್ಟ್ಮೆಂಟ್ ನಿವಾಸಿ ವಿಜಯಲಕ್ಷ್ಮಿ ಎಂಬುವರು ಸೆ.16ರಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಎಂದಿನಂತೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಕೀಯನ್ನು ಕಿಟಕಿ ಹತ್ತಿರ ಇಟ್ಟು ಹೋಗಿದ್ದರು.
ಸಂಜೆ 4 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾದಾಗ ಮನೆಗೆ ಹಾಕಿದ ಕೀ ಹಾಕಿದಂತೆಯೇ ಇತ್ತು. ಒಳಗೆ ಹೋಗಿ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಳವಾಗಿರುವುದು ತಿಳಿದು ಆರ್ಟಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಪೊಲೀಸರು ಬೆರಳಚ್ಚು ತಜ್ಞರನ್ನು ಕರೆಸಿಕೊಂಡಿದ್ದರು. ಪರಿಶೀಲನೆ ವೇಳೆ 2019ರಲ್ಲಿ ಮಲ್ಲೇಶ್ವರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ತೆಗೆದುಕೊಂಡಿದ್ದ ಫಿಂಗರ್ ಪ್ರಿಂಟ್ ತಾಳೆಯಾಗಿತ್ತು. ಈ ಮಾಹಿತಿ ಆಧರಿಸಿ, ಪೊಲೀಸರು ಸೆ.26ರಂದು ಡಿಜೆಹಳ್ಳಿಯ ಕಾವಲ್ ಬೈರಸಂದ್ರದ ವಿನಾಯಕ ಟಾಕೀಸ್ ಹಿಂಭಾಗ ದಂಪತಿಯನ್ನು ಬಂಧಿಸಿ 8.5 ಲಕ್ಷ ರೂ. ಬೆಲೆ ಬಾಳುವ 193 ಗ್ರಾಂ ಚಿನ್ನದ ಆಭರಣಗಳನ್ನು ಆರ್ ಟಿ ನಗರ ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಯಶವಂತಪುರ, ಅಶೋಕನಗರ, ಡಿ.ಜೆ.ಹಳ್ಳಿ, ಅನ್ನಪೂರ್ಣೇಶ್ವರಿನಗರ, ವಿವೇಕನಗರ, ಬೆಳ್ಳಂದೂರು, ವಿಧಾನಸೌಧ, ಕೊತ್ತನೂರು, ಮಡಿವಾಳ, ಕೆ.ಆರ್.ಪುರಂ ಪೊಲೀಸ್ ಠಾಣೆ, ವಿವಿಧ ಠಾಣಾ ವ್ಯಾಪ್ತಿಯಲ್ಲಿ ಮನೆಗಳ್ಳತನ ಪ್ರಕರಣ ಸೇರಿದಂತೆ ಆರು ಪ್ರಕರಣಗಳ ದಾಖಲಾಗಿವೆ.