ನಾಡಹಬ್ಬ ದಸರಾ-2021 ಹಬ್ಬಕ್ಕೆ ಚಾಲನೆ : ದಸರಾ ಉದ್ಘಾಟನೆ ನನಗೆ ದೊಡ್ಡ ಗೌರವ - ಎಸ್.ಎಂ.ಕೃಷ್ಣ | ಜನತಾ ನ್ಯೂಸ್
ಮೈಸೂರು : ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ನಾಡಹಬ್ಬ ದಸರಾ-2021 ಹಬ್ಬಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂದು ಮುಂಜಾನೆ ಐತಿಹಾಸಿಕ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ದೇವಿಯಾ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸದ ಬಳಿಕ ಬೆಳ್ಳಿ ರಥದಲ್ಲಿರುವ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹಾಗೂ ಸಚಿವರುಗಳಾದ ಆರ್.ಅಶೋಕ್, ಡಾ.ಕೆ.ಸುಧಾಕರ್, ಬಿ.ಸಿ.ಪಾಟೀಲ, ಸುನೀಲ್ ಕುಮಾರ್, ಶಿವರಾಂ ಹೆಬ್ಬಾರ್ ಸೇರಿದಂತೆ ಮೈಸೂರು ಭಾಗದ ಶಾಸಕರು, ಸಂಸದರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಎಸ್.ಎಂ.ಕೃಷ್ಣ ಅವರು, ದಸರಾ ಉದ್ಘಾಟನೆಗೆ ಅವಕಾಶ ಕೊಡುವ ಮೂಲಕ ನನಗೆ ದೊಡ್ಡ ಗೌರವ ನೀಡಿದ್ದೀರಿ, ಎಂದು ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ್ದಾರೆ, ಅಲ್ಲದೇ, "ದಸರಾ ಸುಲಲಿತವಾಗಿ ಜರುಗಲಿ. ಉಲ್ಲಾಸದಿಂದ, ಭಕ್ತಿಯಿಂದ ದಸರಾ ಆಚರಿಸೋಣ", ಎಂದು ಹೇಳಿದ್ದಾರೆ.
ಮನುಕುಲಕ್ಕೆ ಬಂದ ದೊಡ್ಡ ಗಂಡಾಂತರ ಕೊರೊನಾ. ಈ ಗಂಡಾಂತರದಿಂದ ಪಾರು ಮಾಡಿ ಎಂದು ಚಾಮುಂಡಿದೇವಿಗೆ ಪೂಜೆ ಸಲ್ಲಿಸಿದ್ದೇವೆ. ಮೈಸೂರು ದಸರಾ ನೋಡಲು ದೇಶ-ವಿದೇಶಗಳಿಂದ ಜನರು ಬರುತ್ತಾರೆ. ಅವರು ರಾಜ್ಯದಲ್ಲಿರುವ ಐತಿಹಾಸಿಕ ಸ್ಥಳಕ್ಕೆ ಭೇಟಿ ಕೊಡುವಂತೆ ನಾವು ಅನುವು ಮಾಡಿಕೊಡಬೇಕು. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತೆ. ರಾಜ್ಯದ ಸಂಪನ್ಮೂಲ ಹೆಚ್ಚಾಗುತ್ತದೆ. ಸಿಂಗಾಪುರನಂತೆ ಮೈಸೂರು ಅಭಿವೃದ್ಧಿಯಾಗಬೇಕಿದೆ. ಅಂಥ ಸಾಧ್ಯತೆಗಳು ಮೈಸೂರಿಗಿದೆ. ಇದನ್ನು ಸರ್ಕಾರ ಸಾಕಾರಗೊಳಿಸಬೇಕಿದೆ, ಎಂದು ಹೇಳಿದರು.
ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರ ಶ್ಲಾಘನೆ ಮಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ದೇಶಕ್ಕಾಗಿ ದೊಡ್ಡ ದೊಡ್ಡ ಕನಸು ಕಂಡಿದ್ದಾರೆ. ಅದಕ್ಕಾಗಿ ದಿನದ 24 ಗಂಟೆ ಕಷ್ಟಪಟ್ಟು ಶ್ರಮಿಸುತ್ತಿದ್ದಾರೆ. ನನ್ನಿಡೀ ಜೀವನದಲ್ಲಿ ಮೋದಿಯಷ್ಟು ಪರಿಶ್ರಮ ಪಡುತ್ತಿರುವವರನ್ನು ಮತ್ತೊಬ್ಬರನ್ನು ನೋಡಿಲ್ಲ. ಅವರ ಶ್ರಮಕ್ಕೆ ನಾವೆಲ್ಲ ಸಹಕಾರ ನೀಡಬೇಕಿದೆ. ಯುವಜನಾಂಗ ದೇಶದ ಆಸ್ತಿ. ಅವರನ್ನು ಪ್ರಗತಿ ಪಥದತ್ತ ಕೊಂಡಯ್ಯಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ, ಕೇಂದ್ರ ಸರ್ಕಾರ ಶ್ರಮಿಸಲಿದೆ ಎಂದು ಭಾವಿಸಿದ್ದೇನೆ, ಎಂದರು.