ಜೆಡಿಎಸ್ಗೆ ಯಾವತ್ತಿದ್ದರೂ ಕಾಂಗ್ರೆಸ್ಸೇ ಟಾರ್ಗೆಟ್: ಸಿದ್ದರಾಮಯ್ಯ | ಜನತಾ ನ್ಯೂಸ್
ಹುಬ್ಬಳ್ಳಿ: : ಜೆಡಿಎಸ್ಗೆ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಷವೇ ಟಾರ್ಗೆಟ್ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಹೇಳಿದರು.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಲ್ಪಸಂಖ್ಯಾತರಿಗೆ ಅವಕಾಶ ಕೊಡಬಾರದು ಎಂದಲ್ಲಾ. ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ನೆಲೆಯಿದೆ. ಆದರೆ ಈ ಭಾಗದಲ್ಲಿ ಅಂತಹ ಪ್ರಾಬಲ್ಯವಿಲ್ಲ. ಹೀಗಾಗಿಯೇ ಈ ಭಾಗದ ಚುನಾವಣೆಗಳಲ್ಲಿ ಬಿಜೆಪಿ ಅನುಕೂಲ ಮಾಡಿಕೊಡುವ ಕೆಲಸ ಜೆಡಿಎಸ್ ಪಕ್ಷದಿಂದ ಆಗುತ್ತಿದೆ. ಒಳ ಒಪ್ಪಂದ ಮಾಡಿಕೊಂಡಿದ್ದಾರೋ ಎನ್ನುವುದರ ಬಗ್ಗೆ ತಮಗೆ ಗೊತ್ತಿಲ್ಲ ಎಂದರು.
ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಜೆಡಿಎಸ್ ಟಿಕೆಟ್ ನೀಡಿದ ವಿಚಾರವಾಗಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಜೆಡಿಎಸ್ಗೆ ಯಾವತ್ತಿದ್ರೂ ಕಾಂಗ್ರೆಸ್ ಟಾರ್ಗೆಟ್. ಹಿಂದೆ ಬಸವಕಲ್ಯಾಣದಲ್ಲೂ ಹಾಗೆ ಮಾಡಿದ್ರು, ಈಗಲೂ ಹಾಗೆ ಮಾಡಿದ್ದಾರೆ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದರೆ ಖಂಡಿತಾ ತಪ್ಪಿಲ್ಲ. ಆದರೆ ಅವರು ಮಂಡ್ಯ ಮತ್ತು ಹಾಸನದಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಲಿ. ಉಪ ಚುನಾವಣೆಯಲ್ಲಿ ಬಿಜೆಪಿಗೆ ನೆರವಾಗಲು ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದೆ ಎಂದು ಆರೋಪಿಸಿದರು.
ಆಡಳಿತದಲ್ಲಿ ಕೋಮುವಾದಿ ಸಂಘಟನೆಗಳ ಹಸ್ತಕ್ಷೇಪ ದೇಶಕ್ಕೆ ಒಳ್ಳೆಯದಲ್ಲ. ಮುಸ್ಲಿಂರ ಮೇಲೆ ಹಿಂದೂಗಳನ್ನು ಎತ್ತಿಗಟ್ಟಿ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವುದೇ ಇವರ ಕೆಲಸ. ಆದರೆ ಕಾಂಗ್ರೆಸ್ ಪಕ್ಷ ಎಲ್ಲಾ ಧರ್ಮಗಳನ್ನು ಗೌರವಿಸಿ ಸಮಾನವಾಗಿ ಕಾಣುತ್ತದೆ ಎಂದು ವಾಗ್ದಾಳಿ ನಡೆಸಿದರು.